ಮಳವಳ್ಳಿ: ‘ಸಮಾನತೆ, ಸಾಮಾಜಿಕ ನ್ಯಾಯದ ಅರ್ಥವನ್ನೇ ಅರಿಯದ ಬಿಜೆಪಿಯವರು ಭಾರತ ಸಂವಿಧಾನವನ್ನು ಮುಟ್ಟಿದರೆ ಇಡೀ ದೇಶದ ಜನರು ದಂಗೆ ಏಳುತ್ತಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಲ್ಲಿನ ಕನಕದಾಸ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಭಾರತ ಸಂವಿಧಾನ ಇಡೀ ಜಗತ್ತಿನಲ್ಲೇ ಶ್ರೇಷ್ಠವಾದುದು. ಇದನ್ನು ಬದಲಾವಣೆ ಮಾಡುವ ಬಗ್ಗೆ ಮಾತನಾಡಿದರೆ ಯಾರೂ ಸಹಿಸುವುದಿಲ್ಲ.
ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಕೇಂದ್ರದ ಮಂತ್ರಿ ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಾರೆ. ಈ ನೆಲದ ಕಾನೂನನ್ನು ಕಂಡರೆ ಬಿಜೆಪಿ ಮುಖಂಡರಿಗೆ ಆಗಿಬರುವುದಿಲ್ಲ. ಹಿಂದುತ್ವದ ಹೆಸರಿನಲ್ಲಿ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ’ ಎಂದರು.
ಹೆಲಿಪ್ಯಾಡ್ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ ‘ಆದಾಯ ತೆರಿಗೆ ಇಲಾಖೆಯನ್ನು ದುರುಪಯೋಗ ಮಾಡಿಕೊಂಡಿರುವ ಕೇಂದ್ರ ಸರ್ಕಾರ, ಕಾಂಗ್ರೆಸ್ ಮುಖಂಡರ ಮನೆ ಮೇಲೆ ದಾಳಿ ಮಾಡಿಸುತ್ತಿದೆ. ಸುಪ್ರೀಂ ಕೋರ್ಟ್ನಲ್ಲಿ ಕಾವೇರಿ ತೀರ್ಪಿನ ಮೇಲ್ಮನವಿಗಳ ವಿಚಾರಣಾ ಪ್ರಕ್ರಿಯೆ ಮುಗಿದಿದ್ದು, ರಾಜ್ಯದ ಪರವಾಗಿ ತೀರ್ಪು ಬರಬಹುದು ಎಂಬ ಆಶಾವಾದ ಇದೆ’ ಎಂದರು.
‘ಜನರೇ ಬಂಧಿಸುತ್ತಾರೆ’
ಮೈಸೂರು: ಬಿಜೆಪಿಯವರನ್ನು ಪೊಲೀಸರು ಬಂಧಿಸುವ ಅಗತ್ಯವಿಲ್ಲ. ಜನರೇ ಅವರನ್ನು ಬಂಧಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಶುಕ್ರವಾರ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ‘ಜನರ ಮನಸ್ಸಿನಲ್ಲಿ ಕೋಮು ಭಾವನೆ ಬಿತ್ತಿದರೆ, ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡಿದರೆ, ಇನ್ನೊಂದು ಧರ್ಮದವರನ್ನು ದ್ವೇಷಿಸಿದರೆ ಜನರೇ ಪಾಠ ಕಲಿಸುತ್ತಾರೆ. ಕೆಲ ಸಂಘಟನೆಗಳು ಇಂಥ ಕೆಲಸದಲ್ಲಿ ತೊಡಗಿವೆ’ ಎಂದು ಆರೋಪಿಸಿದರು.
‘ಜೈಲಿಗೆ ಹೋಗಲಿ ಬಿಡಿ’: ‘ಸಂಘ ಪರಿವಾರದ ಸಂಘಟನೆಗಳ ಮುಖಂಡರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೈಲಿಗೆ ಹೋಗಿರಲಿಲ್ಲ. ಈಗ ಬಿಜೆಪಿಯವರಾದರೂ ಜೈಲಿಗೆ ಹೋಗಲಿ ಬಿಡಿ’ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ವ್ಯಂಗ್ಯವಾಡಿದರು.
ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಶುಕ್ರವಾರ ಉಡುಪಿಗೆ ಬಂದಿದ್ದ ಅವರು, ಬಿಜೆಪಿಯ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.