ಮೈಸೂರು: ಚಾಮುಂಡಿಬೆಟ್ಟದ ಅರಣ್ಯದಲ್ಲಿ ಸೋಮವಾರ ಕಾಣಿಸಿಕೊಂಡ ಬೆಂಕಿಗೆ 5 ಎಕರೆಗೂ ಹೆಚ್ಚು ಪ್ರದೇಶ ಆಹುತಿಯಾಗಿದೆ. ಅಗ್ನಿಶಾಮಕ ಪಡೆ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿಯನ್ನು ತಹಬದಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತನಹಳ್ಳಿಯಿಂದ ನಂದಿ ವಿಗ್ರಹಕ್ಕೆ ಹೋಗುವ ಮಾರ್ಗದಲ್ಲಿರುವ ಕುರುಚಲು ಅರಣ್ಯದಲ್ಲಿ ಮೊದಲಿಗೆ ಬೆಂಕಿ ಕಾಣಿಸಿಕೊಂಡಿದೆ. ಅರಣ್ಯ ಇಲಾಖೆ ಸಿಬ್ಬಂದಿ ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ನಂತರ, ಸ್ಥಳಕ್ಕೆ ಸರಸ್ವತಿಪುರಂ, ಹೆಬ್ಬಾಳು ಹಾಗೂ ಬನ್ನಿಮಂಟಪದ ಅಗ್ನಿಶಾಮಕದಳ ಠಾಣೆಗಳಿಂದ 5 ವಾಹನಗಳು ಬಂದವು.
ಅರಣ್ಯದ ಒಳಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ವಾಹನ ತಲುಪಲು ಮೊದಲಿಗೆ ಗಿಡಗಂಟಿಗಳು ತಡೆಯಾದವು. ನಂತರ, ಅವುಗಳನ್ನು ಕತ್ತರಿಸಿ ಜಾಗ ಮಾಡಿಕೊಂಡು ವಾಹನವನ್ನು ಬೆಂಕಿ ಇರುವ ಕಡೆ ತೆಗೆದುಕೊಂಡು ಹೋಗಿ ನಂದಿಸಲಾಯಿತು. ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ಕಾರ್ಯಾಚರಣೆ ನಡೆಸಿ, ನಿಯಂತ್ರಣಕ್ಕೆ ತರಲಾಯಿತು ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.