ಬೆಳಗಾವಿ: ಜಿಲ್ಲಾಡಳಿತಕ್ಕೆ ತಿಳಿಸದೆ ಗೋವಾ ಸ್ಪೀಕರ್ ಪ್ರಮೋದ ಸಾವಂತ ನೇತೃತ್ವದ ತಂಡ ಕಳಸಾ ಬಂಡೂರಿ ಸ್ಥಳಕ್ಕೆ ಭಾನುವಾರ ಭೇಟಿ ನೀಡಿದೆ.
ಗೋವಾದ ಮಾಧ್ಯಮದವರು, ಅಲ್ಲಿಯ ಪೊಲೀಸ್ ಅಧಿಕಾರಿಗಳೂ ಆಗಮಿಸಿದ್ದರು.
ಕೆಲದಿನಗಳ ಹಿಂದೆಯಷ್ಟೆ ಗೋವಾ ಜಲಸಂಪನ್ಮೂಲ ಸಚಿವ ವಿನೋದ ಪಾಲ್ಯೇಕರ ಈ ಸ್ಥಳಕ್ಕೆ ಭೇಟಿ ನೀಡಿದ್ದರು. ಅದಕ್ಕೂ ಮೊದಲು ಗೋವಾ ಅಧಿಕಾರಿಗಳು ಬಂದಿದ್ದರು.
ಒಂದು ರಾಜ್ಯದ ನೀರಾವರಿ ಪ್ರದೇಶಕ್ಕೆ ಮತ್ತೊಂದು ರಾಜ್ಯ ಸರ್ಕಾರದ ಪ್ರತಿನಿಧಿಗಳು ಭೇಟಿ ನೀಡುವ ಮೊದಲು ಅಲ್ಲಿಯ ಜಿಲ್ಲಾಡಳಿತಕ್ಕೆ ಮುನ್ಸೂಚನೆ ನೀಡಲೇಬೇಕೆಂಬ ನಿಯಮವನ್ನು ಗಾಳಿಗೆ ತೂರುತ್ತಿರುವ ಗೋವಾ ತನ್ನ ಮೊಂಡತನವನ್ನು ಪ್ರದರ್ಶಿಸುತ್ತಿದೆ. ಅಲ್ಲದೇ ಆಕ್ರಮಣಕಾರಿ ನಿಲುವನ್ನು ತಳೆಯುತ್ತಿದೆ. ಇದನ್ನು ಕರ್ನಾಟಕ ಸರ್ಕಾರ ಯಾವ ರೀತಿ ಎದುರಿಸುವುದೆಂಬುದನ್ನು ಕಾದು ನೋಡಬೇಕು ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋ ಚಂದರಗಿ ತಿಳಿಸಿದ್ದಾರೆ.
ಫೆ. 6ರಿಂದ ಮಹದಾಯಿ ನ್ಯಾಯಮಂಡಳಿ ಮುಂದೆ ಅಂತಿಮ ಸುತ್ತಿನ ವಿಚಾರಣೆ ಆರಂಭಗೊಳ್ಳಲಿರುವ ಹಿನ್ನೆಲೆಯಲ್ಲಿ ಗೋವಾದ ಎಲ್ಲ ಪಕ್ಷಗಳು ಒಗ್ಗಟ್ಟಿನ ಪ್ರದರ್ಶನ ಮಾಡುತ್ತಿವೆ. ಆದರೆ ಕರ್ನಾಟಕದ ರಾಜಕೀಯ ಪಕ್ಷಗಳು ಜಗಳಿಕ್ಕಿಳಿದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.