ADVERTISEMENT

ಮಲೇಷ್ಯಾದಿಂದ ಮರಳು ಆಮದು: ಸಿಐಡಿಗೆ ಪತ್ರ

ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2018, 19:30 IST
Last Updated 31 ಜನವರಿ 2018, 19:30 IST

ಹುಬ್ಬಳ್ಳಿ: ‘ಮಲೇಷ್ಯಾದಿಂದ ಕಡಿಮೆ ಬೆಲೆಗೆ ಮರಳನ್ನು ಆಮದು ಮಾಡಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದು, ಇದರಲ್ಲಿ ಭಾರಿ ಅಕ್ರಮ ನಡೆದಿದೆ. ಈ ಕುರಿತು ತನಿಖೆಗೆ ಆಗ್ರಹಿಸಿ ಸಿಐಡಿಗೆ ಪತ್ರ ಬರೆಯುತ್ತೇನೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಬುಧವಾರ ಇಲ್ಲಿ ಹೇಳಿದರು.

‘ಮಲೇಷ್ಯಾದಲ್ಲಿ ಟನ್‌ಗೆ ₹260ಕ್ಕೆ ಸಿಗುವ ಮರಳನ್ನು ಸರ್ಕಾರ, ಎಂಎಸ್‌ಐಎಲ್ ಮೂಲಕ ₹4,600ಕ್ಕೆ ಮಾರಾಟ ಮಾಡುತ್ತಿದೆ. ಈ ಸಂಬಂಧ ದಾಖಲೆಗಳನ್ನು ಬಿಡುಗಡೆ ಮಾಡಿದ್ದರೂ ಸಚಿವ ವಿನಯ ಕುಲಕರ್ಣಿ ಸಮರ್ಪಕ ಉತ್ತರ ನೀಡಿಲ್ಲ. ಮರಳಿನ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ. ಟೆಂಡರ್‌ ಕೂಡ ಪಾರದರ್ಶಕವಾಗಿಲ್ಲ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಬಜೆಟ್‌ ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸುವುದರ ಜೊತೆಗೆ ಜನರ ಮುಂದೆ ಕೂಡ ಬಿಜೆಪಿ ತೆಗೆದುಕೊಂಡು ಹೋಗಲಿದೆ’ ಎಂದರು.

ADVERTISEMENT

ಕಣಕುಂಬಿ ಭೇಟಿ ತಪ್ಪು: ‘ಮಹದಾಯಿ ವಿವಾದ ನ್ಯಾಮಮಂಡಳಿಯಲ್ಲಿ ಇರುವಾಗ ಗೋವಾ ವಿಧಾನಸಭೆಯ ಉಪ ಸಭಾಧ್ಯಕ್ಷ ಮೈಕೆಲ್‌ ಲೊಬೊ ಅವರು, ಕಣಕುಂಬಿಗೆ ಭೇಟಿ ನೀಡಿದ್ದು ತಪ್ಪು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಬಾಂಗ್ಲಾ ದೇಶದಿಂದ ಲಕ್ಷಾಂತರ ಮಂದಿ ಬೆಂಗಳೂರಿಗೆ ಬಂದು ನೆಲೆಸುತ್ತಿದ್ದಾರೆ. ವೋಟ್‌ಗಾಗಿ ಕಾಂಗ್ರೆಸ್‌ ಶಾಸಕರು ಅವರಿಗೆ ಆಧಾರ್ ಕಾರ್ಡ್‌, ಇನ್ನಿತರ ಖೊಟ್ಟಿ ದಾಖಲಾತಿಗಳನ್ನು ಮಾಡಿಸಿಕೊಡುತ್ತಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.