ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷಾ ಪ್ರಕ್ರಿಯೆಗೆ ಆಧುನಿಕ ಸ್ಪರ್ಶ ನೀಡಲು ಮುಂದಾಗಿರುವ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಈ ಬಾರಿಯಿಂದ ವಿದ್ಯಾರ್ಥಿಗಳ ಪ್ರವೇಶ ಪತ್ರಗಳನ್ನು ಆನ್ಲೈನ್ನಲ್ಲಿ ಮಾತ್ರ ದೊರೆಯುವ ವ್ಯವಸ್ಥೆ ಮಾಡಿದೆ. ಜತೆಗೆ ವಿದ್ಯಾರ್ಥಿಗಳ ಫಲಿತಾಂಶದ ಸಂದೇಶವನ್ನು ಅವರ ಪೋಷಕರ ಮೊಬೈಲ್ಗೆ ರವಾನಿಸಲೂ ಚಿಂತಿಸಿದೆ.
ಈ ಬಾರಿ ಪರೀಕ್ಷೆ ಬರೆಯುವ 8.54 ಲಕ್ಷ ವಿದ್ಯಾರ್ಥಿಗಳ ಪ್ರವೇಶ ಪತ್ರಗಳು ‘ವಿದ್ಯಾರ್ಥಿ ಸಾಧನೆಯ ಟ್ರಾಕಿಂಗ್ ವ್ಯವಸ್ಥೆ’ ಜಾಲತಾಣದಲ್ಲಿ (ಎಸ್ಎ
ಟಿಎಸ್) ಅಪ್ ಲೋಡ್ ಮಾಡಲಾಗಿದೆ. ಅವುಗಳನ್ನು ಶಾಲಾ ಮುಖ್ಯಶಿಕ್ಷಕರು ಡೌನ್ಲೋಡ್ ಮಾಡಿಕೊಂಡು, ವಿದ್ಯಾರ್ಥಿಗಳಿಗೆ ವಿತರಿಸಬಹುದು ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ. ಸುಮಂಗಲ ‘ಪ್ರಜಾವಾಣಿ’ಗೆ ತಿಳಿಸಿದರು.
’ಪ್ರವೇಶ ಪತ್ರದಲ್ಲಿ ವಿದ್ಯಾರ್ಥಿಯ ಹೆಸರು, ಹುಟ್ಟಿದ ದಿನಾಂಕ, ನೋಂದಣಿ ಸಂಖ್ಯೆ, ಭಾವಚಿತ್ರ, ಲಿಂಗ, ಭಾಷಾ ವಿಷಯಗಳು, ಐಚ್ಛಿಕ ವಿಷಯಗಳನ್ನು ದಾಖಲಿಸಲಾಗಿರುತ್ತದೆ. ಈ ಮಾಹಿತಿಯಲ್ಲಿ ಏನಾದರೂ ಲೋಪ ಕಂಡು ಬಂದಲ್ಲಿ ಮುಖ್ಯ ಶಿಕ್ಷಕರು ಎಸ್ಎಟಿಎಸ್ನಲ್ಲಿ ಇದೇ 17ರೊಳಗೆ ನಮೂದಿಸಬೇಕು. ಲೋಪ ಸರಿಪಡಿಸಿ ಎರಡು ದಿನಗಳಲ್ಲಿ ಪರಿಷ್ಕೃತ ಪ್ರವೇಶ ಪತ್ರವನ್ನು ಎಸ್ಎಟಿಎಸ್ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ’ ಎಂದು ಅವರು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.