ಚಿಕ್ಕಮಗಳೂರು: ತೆಂಗಿನಕಾಯಿ ಚೂರು ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಉಸಿರಾಟ ಸಮಸ್ಯೆಯಾಗಿ ನಗರದ ಸಂಜೀವಿನಿ ಶಾಲೆಯ ಶಿಕ್ಷಕಿ ನವ್ಯಶ್ರೀ (28) ಶನಿವಾರ ಮೃತಪಟ್ಟಿದ್ದಾರೆ.
ಹಿರೇಮಗಳೂರು ನಿವಾಸಿ ನವ್ಯಶ್ರೀ ಅವರು ಪತಿ ಶ್ರೀಧರ್ ಜತೆ ಶನಿವಾರ ಬೆಳಿಗ್ಗೆ ಶನಿದೇವರ ದೇಗುಲದಲ್ಲಿ ಪೂಜೆ ಸಲ್ಲಿಸಿ, ನಂತರ ಪತಿಯೊಂದಿಗೆ ಬೈಕಿನಲ್ಲಿ ಶಾಲೆಗೆ ತೆರಳಿದ್ದರು. ಶಾಲೆಯಲ್ಲಿ ಈ ಅವಘಡ ನಡೆದಿದೆ. ಅವರಿಗೆ ಹತ್ತು ತಿಂಗಳ ಮಗು ಇದೆ.
‘ಶಾಲೆಯಲ್ಲಿ ಇತರ ಶಿಕ್ಷಕರೊಂದಿಗೆ ನವ್ಯಶ್ರೀ ಮಾತನಾಡುತ್ತಿದ್ದರು. ಈ ವೇಳೆ ದೇಗುಲದಿಂದ ತಂದಿದ್ದ ಪ್ರಸಾದದ ತೆಂಗಿನಕಾಯಿ ತಿಂದರು. ಗಂಟಲಿನಲ್ಲಿ ತೆಂಗಿನಕಾಯಿ ಚೂರು ಸಿಲುಕಿಕೊಂಡು ಉಸಿರಾಟದ ಸಮಸ್ಯೆಯಾಗಿ ಅಸ್ವಸ್ಥರಾಗಿ ಕೆಳಕ್ಕೆ ಬಿದ್ದರು. ತಕ್ಷಣವೇ ಅವರನ್ನು ಹೋಲಿಕ್ರಾಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ನವ್ಯಶ್ರೀ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದರು’ ಎಂದು ಅವರ ಸಂಬಂಧಿ ಕುಮಾರ್ ತಿಳಿಸಿದರು. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.