ಶ್ರವಣಬೆಳಗೊಳ: ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಅನಿವಾಸಿ ಭಾರತೀಯರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸುಮಾರು 250 ಮಂದಿ ಪಾಲ್ಗೊಂಡಿದ್ದಾರೆ.
6ನೇ ದಿನದ ಮಸ್ತಕಾಭಿಷೇಕದ ಸಂದರ್ಭದಲ್ಲಿ ಗುರುವಾರ ಅನಿವಾಸಿ ಭಾರತೀಯರಿಗೆ ಅವಕಾಶ ಕಲ್ಪಿಸಲಾಗಿತ್ತು ಎಂದು ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಆರತಿ ಕೃಷ್ಣ ತಿಳಿಸಿದರು.
ಪೊಲೀಸ್ ನಗರದಲ್ಲಿ ನಡೆದ ‘ರಾಜ್ಯ ಸರ್ಕಾರದ ಅನಿವಾಸಿ ಭಾರತೀಯ ನೀತಿ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಾಮಸ್ತಕಾಭಿಷೇಕ ಕುರಿತು ಅನಿವಾಸಿ ಭಾರತೀಯರಿಗೆ ರಾಜ್ಯ ಸರ್ಕಾರ ಮಾಹಿತಿ ಒದಗಿಸಿತ್ತು. ಕಡಿಮೆ ಅವಧಿಯಲ್ಲಿ 250 ಜನರು ಸ್ಪಂದಿಸಿದ್ದಾರೆ. ಇವರಿಗೆ ಹಾಸನದಲ್ಲಿ ವಾಸ್ತವ್ಯ ಮತ್ತು ಬೆಂಗಳೂರಿನಿಂದ ಶ್ರವಣಬೆಳಗೊಳಕ್ಕೆ ಹೋಗಿ ಬರಲು 6 ಬಸ್ಗಳ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು ಎಂದರು.
ಆಶೀರ್ವಚನ ನೀಡಿದ ಕ್ಷೇತ್ರದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ‘ಭಕ್ತಿಯಿಂದ ಶಕ್ತಿ ದೊರೆಯುತ್ತದೆ. ಶಕ್ತಿಯಿಂದ ಯುಕ್ತಿ, ಹಾಗೆಯೇ ಯುಕ್ತಿಯಿಂದ ಮುಕ್ತಿ ಉಂಟಾಗುತ್ತದೆ ಎಂದರು.
‘ಪುರಾತತ್ವ ಇಲಾಖೆ ಮಾಹಿತಿಯ ಪ್ರಕಾರ, ಹರಪ್ಪಾ ಮೆಹೆಂಜೊದಾರೊ ಸಮಯದಲ್ಲಿ 5000 ವರ್ಷಗಳ ಹಿಂದಿನ ಭಗವಾನ್ ವೃಷಭನಾಥ ಮತ್ತು ಬಾಹುಬಲಿಯ ವಿಗ್ರಹ ದೊರೆತಿದೆ. ಇದು, ತೀರ್ಥಂಕರ ಮತ್ತು ಬಾಹುಬಲಿಯ ಪ್ರಾಚೀನತೆಯನ್ನು ಬಿಂಬಿಸಲಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.