ADVERTISEMENT

ಕೃಷಿಯಲ್ಲಿ ‘ಕ್ರಾಂತಿಕಾರಿ’ ಬದಲಾವಣೆಗೆ ಐಡಿಯಾ ಇದೆಯೇ?

ಸಂಶೋಧಕರಿಗೊಂದು ಅವಕಾಶ

​ಪ್ರಜಾವಾಣಿ ವಾರ್ತೆ
Published 13 ಮೇ 2019, 20:00 IST
Last Updated 13 ಮೇ 2019, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮುಂದಿನ ಕೆಲವೇ ವರ್ಷಗಳಲ್ಲಿ ದೇಶದ ಕೃಷಿ ಕ್ಷೇತ್ರದಲ್ಲಿ ‘ಕ್ರಾಂತಿಕಾರಿ’ ಬದಲಾವಣೆ ತರುವ ಅದ್ಭುತ ಪರಿಕಲ್ಪನೆ ಹೊಂದಿರುವವರಿಗಾಗಿ ಹುಡುಕಾಟ ನಡೆದಿದೆ.

ಭಾರತೀಯ ಕೃಷಿ ಕ್ಷೇತ್ರದಲ್ಲಿರುವ ಕೊರತೆಗಳು, ಸವಾಲುಗಳು ಮತ್ತು ಸಮಸ್ಯೆಗಳನ್ನು ಗುರುತಿಸಬೇಕು ಮತ್ತು ಪರಿಹಾರ ಬದಗಿಸುವ ನಿಟ್ಟಿನಲ್ಲಿ ಸಂಶೋಧನೆಗಳ ‘ಐಡಿಯಾ’ ಹೊಂದಿರಬೇಕು. ಈ ದಿಸೆಯಲ್ಲಿ ಸಂಶೋಧನೆ ನಡೆಸಲು ಒಂದು ಉತ್ತಮ ಅವಕಾಶ.

ಭಾರತದ ಕೃಷಿ ಕ್ಷೇತ್ರದ ಭವಿಷ್ಯವನ್ನೇ ಬದಲಿಸಬಲ್ಲ ಕನಿಷ್ಠ 8 ರಿಂದ 10 ಸಂಶೋಧನೆಗಳು ಆಗಬೇಕಿದೆ. ಇವುಗಳನ್ನು ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಕಾರ್ಯಗತಗೊಳಿಸಲು ಬಳಸಲಾಗುವುದು. ಇದಕ್ಕೆ ‘ಅಗ್ರಿ ಇಮ್ಮರ್ಶನ್‌’ ಕಾರ್ಯಕ್ರಮ ಎಂದು ಹೆಸರಿಸಲಾಗಿದೆ. ಇದನ್ನುಸಿ–ಕ್ಯಾಂಪ್‌ನ (ಸೆಂಟರ್‌ ಫಾರ್‌ ಸೆಲ್ಯುಲರ್‌ ಅಂಡ್‌ ಮಾಲೆಕ್ಯುಲರ್‌ ಪ್ಲಾಟ್‌ ಫಾರಂ) ಕೃಷಿ ನಾವಿನ್ಯ ಉತ್ಕೃಷ್ಟತಾ ಕೇಂದ್ರ ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಜಂಟಿಯಾಗಿ ಹಮ್ಮಿಕೊಂಡಿವೆ ಎಂದು ಸಿ–ಕ್ಯಾಂಪ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಈ ಕಾರ್ಯಕ್ರಮದ ಮೂಲಕ ಕೃಷಿ ಕ್ಷೇತ್ರದಲ್ಲಿ ಬೆಳವಣಿಗೆಗೆ ಇರುವ ಪ್ರಮುಖ ವಲಯ ಮತ್ತು ಸಮಸ್ಯೆಗಳನ್ನು ಗುರುತಿಸಬೇಕು. ಇದಕ್ಕಾಗಿ 10 ಪ್ರತಿಭಾವಂತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಇವರಿಗೆ ಸಂಶೋಧನಾ ಮತ್ತು ಉದ್ಯಮಶೀಲತೆ ಮನೋಭಾವವೂ ಇರಬೇಕು. ಇಲ್ಲಿಯವರೆಗೆ ಗುರುತಿಸಲಾಗದ ಮತ್ತು ವಾಣಿಜ್ಯದಾಯಕ ಅವಕಾಶವಿರುವ 100 ರಿಂದ 200 ಪ್ರಮುಖ ಕ್ಷೇತ್ರಗಳನ್ನು ಪಟ್ಟಿ ಮಾಡಬೇಕಾಗುತ್ತದೆ ಎಂದು ಅವರು ಹೇಳಿದರು.

ಇದು ಆರು ತಿಂಗಳ ಕಾರ್ಯಕ್ರಮವಾಗಿದ್ದು, ಆಯ್ಕೆಯಾದವರು ರೈತರು ಮತ್ತು ಸಂಶೋಧನೆ ಆಯ್ಕೆ ಮಾಡಿಕೊಂಡ ವಿಷಯಗಳ ಸಂಪನ್ಮೂಲ ವ್ಯಕ್ತಿಗಳ ಜತೆಯಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಅವರಿಂದ ಮಾಹಿತಿಗಳನ್ನು ಕಲೆ ಹಾಕಬೇಕು. ಸಂಶೋಧನೆಯಲ್ಲಿ ತೊಡಗಬೇಕಾದವರು ಕೃಷಿಯಲ್ಲದೆ, ಇತರ ಯಾವುದೇ ವಿಷಯಗಳಲ್ಲಿ ಪದವಿ ಮಾಡಿದ್ದರೂ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಮೇ 17 ಕೊನೆಯ ದಿನವಾಗಿದೆ. agri@ccamo.res.in ಗೆ ಅರ್ಜಿ ಸಲ್ಲಿಸಸಬೇಕು. https://docs.google.com/forms ನಲ್ಲಿ ಅರ್ಜಿ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.