ಬೆಂಗಳೂರು: ಅಧಿವೇಶನದ ವೇಳೆಯಲ್ಲಿ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಕ್ಷಣ ಕ್ಷಣಕ್ಕೂ ಕಾಡಲು ಬಿಜೆಪಿ ತೀರ್ಮಾನಿಸಿದೆ.
ವಿಧಾನಮಂಡಲದ ಬುಧವಾರದ ಕಲಾಪ ಮುಕ್ತಾಯಗೊಂಡ ಬಳಿಕ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಶಾಸಕಾಂಗ ಪಕ್ಷದ ಸಭೆ ನಡೆಸಿದರು. ದಿನವೂ ಸಭೆ ನಡೆಸಲಿದ್ದು ಎಲ್ಲ ಶಾಸಕರು ಹಾಜರಿರಬೇಕು ಎಂದು ತಾಕೀತು ಮಾಡಿದರು.
‘ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಪಡಿಸುವ ಮೂಲಕ ಸ್ವಲ್ಪ ಮಟ್ಟಿಗೆ ಯಶಸ್ಸು ಗಳಿಸಲಾಗಿದೆ. ಯಾವುದೇ ಕಾರಣಕ್ಕೂ ಸುಗಮವಾಗಿ ಕಲಾಪ ನಡೆಯಲು ಬಿಡಬಾರದು. ಗುರುವಾರದ ಕಲಾಪ ಹಾಗೂ ಬಜೆಟ್ ಮಂಡಿಸುವ ವೇಳೆಯೂ ಧರಣಿ ನಡೆಸಬೇಕು. ಈ ಮೂಲಕ ಸರ್ಕಾರದ ವಿರುದ್ಧ ಇನ್ನಷ್ಟು ಜನಾಭಿಪ್ರಾಯ ಮೂಡಿಸಬೇಕು’ ಎಂದು ಸಭೆಯಲ್ಲಿ ಚರ್ಚಿಸಲಾಯಿತು.
ಮೊದಲ ದಿನದ ಕಲಾಪಕ್ಕೆ ಮೈತ್ರಿಕೂಟದ ಎಂಟಕ್ಕೂ ಅಧಿಕ ಶಾಸಕರು ಗೈರುಹಾಜರಾಗಿದ್ದರು. ಅವರಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮೇಲೆ ವಿಶ್ವಾಸ ಇಲ್ಲ ಎಂಬುದು ಸಾಬೀತಾಗಿದೆ. ಇದೇ ವಿಷಯವನ್ನು ಮುಂದಿಟ್ಟುಕೊಂಡು ಗುರುವಾರವೂ ಕಲಾಪದಲ್ಲಿ ಹೋರಾಟ ಮಾಡಲು ನಿರ್ಧರಿಸಲಾಯಿತು.
‘ಕಳೆದ ಎಂಟು ತಿಂಗಳಿಂದ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಿರಂತರವಾಗಿ ಸಾಗಿದೆ. ಇದರಲ್ಲಿ ಕಾಂಗ್ರೆಸ್ ಶಾಸಕರ ಪಾತ್ರವೇ ದೊಡ್ಡದಿದೆ. ಇದರಿಂದಾಗಿ ಮೈತ್ರಿ ಸರ್ಕಾರ ಟೇಕಾಫ್ ಆಗಿಲ್ಲ ಎಂಬ ಭಾವನೆ ಜನರಲ್ಲಿ ಮೂಡಿದೆ. ಜತೆಗೆ, ನಮ್ಮ ಪಕ್ಷದಿಂದಲೂ ಆಪರೇಷನ್ ಕಮಲದ ಯತ್ನ ಸಾಗಿದೆ. ಅತೃಪ್ತ ಶಾಸಕರ ಸಂಖ್ಯೆ ಹೆಚ್ಚಿದರೆ ಅಧಿವೇಶನ ಮುಗಿಯುವ ಮುನ್ನವೇ ಸರ್ಕಾರ ಪತನವಾಗಲಿದೆ. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸುವ ಕೆಲಸ ಇನ್ನಷ್ಟು ಜೋರಾಗಲಿದೆ. ಕಲಾಪಕ್ಕೆ ಅಡ್ಡಿಪಡಿಸುವುದು ಈ ಕಾರ್ಯತಂತ್ರದ ಭಾಗ’ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದರು.
‘ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಿಲ್ಲ. ರಾಜ್ಯಪಾಲರನ್ನು ಭೇಟಿ ಮಾಡುವುದಿಲ್ಲ’ ಎಂದು ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದರು.
‘ಈ ಸರ್ಕಾರಕ್ಕೆ ಬಹುಮತ ಇಲ್ಲ. ಕಲಾಪಕ್ಕ 15 ಶಾಸಕರು ಗೈರುಹಾಜರಾಗಿದ್ದಾರೆ. ಕುಮಾರಸ್ವಾಮಿ ಕೂಡಲೇ ರಾಜೀನಾಮೆ ನೀಡಬೇಕು. ಈ ಸಂಬಂಧ ಸದ್ಯದಲ್ಲೇ ರಾಜ್ಯಪಾಲರ ಭೇಟಿ ಮಾಡುತ್ತೇವೆ. ಬಹುಮತ ಇಲ್ಲದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಅವರಿಂದ ರಾಜೀನಾಮೆ ಪಡೆಯಲು ಮನವಿ ಮಾಡುತ್ತೇವೆ’ ಎಂದು ಶಾಸಕ ಬಿ.ಶ್ರೀರಾಮುಲು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.