ಬೆಂಗಳೂರು: ಎಲೆಕ್ಟ್ರಿಕಲ್ ಮತ್ತು ಹಾರ್ಡ್ವೇರ್ ಉದ್ಯಮಿಯೊಬ್ಬರಿಗೆ ಸರಕು ಹಾಗೂ ಸೇವಾ ತೆರಿಗೆ (ಜಿಎಸ್ಟಿ) ನೋಂದಣಿ ಪ್ರಮಾಣಪತ್ರ ನೀಡಲು ₹ 3,000 ಲಂಚ ಪಡೆಯುತ್ತಿದ್ದ ವಾಣಿಜ್ಯ ತೆರಿಗೆ ಇಲಾಖೆ ಇಂದಿರಾನಗರ ಕಚೇರಿಯ ಸಹಾಯಕ ಆಯುಕ್ತೆ ಪ್ರಿಯಾಂಕಾ ಜಿ.ಸಿ. ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶುಕ್ರವಾರ ಬಂಧಿಸಿದೆ.
ಮಂಜುನಾಥನಗರದ ಕಲ್ಕೆರೆ ನಿವಾಸಿಯೊಬ್ಬರು ಜಿಎಸ್ಟಿ ಪ್ರಮಾಣಪತ್ರ ಕೋರಿ ಅರ್ಜಿ ಸಲ್ಲಿಸಿದ್ದರು. ದಾಖಲೆಯಲ್ಲಿ ಅಂಚೆ ಪೆಟ್ಟಿಗೆ ಸಂಖ್ಯೆಯನ್ನು ಅರ್ಜಿಯಲ್ಲಿ ತಪ್ಪಾಗಿ ನಮೂದಿಸಿದ್ದರು. ಇದರಿಂದಾಗಿ ಪ್ರಮಾಣಪತ್ರ ವಿತರಿಸಿರಲಿಲ್ಲ. ಅರ್ಜಿಯಲ್ಲಿನ ತಪ್ಪು ಸರಿಪಡಿಸಿ, ಪ್ರಮಾಣಪತ್ರ ನೀಡಲು ₹ 10,000 ಲಂಚ ನೀಡುವಂತೆ ಆರೋಪಿ ಬೇಡಿಕೆ ಇಟ್ಟಿದ್ದರು.
ಚೌಕಾಸಿ ಮಾಡಿದಾಗ ₹ 3,000 ನೀಡಿದರೆ ಪ್ರಮಾಣಪತ್ರ ಕೊಡುವುದಾಗಿ ತಿಳಿಸಿದ್ದರು. ಈ ಕುರಿತು ಅರ್ಜಿದಾರರು ಎಸಿಬಿ ಬೆಂಗಳೂರು ನಗರ ಘಟಕಕ್ಕೆ ದೂರು ಸಲ್ಲಿಸಿದ್ದರು. ಶುಕ್ರವಾರ ಅರ್ಜಿದಾರರಿಂದ ಲಂಚ ಪಡೆಯುತ್ತಿದ್ದಾಗ ದಾಳಿಮಾಡಿದ ಎಸಿಬಿ ಅಧಿಕಾರಿಗಳು, ಪ್ರಿಯಾಂಕಾ ಅವರನ್ನು ಬಂಧಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.