ಬೆಂಗಳೂರು: ‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಗಣತಿ) ವರದಿಯನ್ನು ರಾಜ್ಯ ಸರ್ಕಾರ ಸ್ವೀಕರಿಸಿ, ಅದರ ಶಿಫಾರಸುಗಳನ್ನು ಜಾರಿಗೊಳಿಸಬೇಕು’ ಎಂದು ಕಾಂಗ್ರೆಸ್ ಮುಖಂಡ ಎಚ್.ಸಿ. ಮಹದೇವಪ್ಪ ಆಗ್ರಹಿಸಿದ್ದಾರೆ.
‘ವರದಿ ಬಹಿರಂಗಪಡಿಸದಂತೆ ಕೆಲ ಸಮುದಾಯಗಳು ಒತ್ತಾಯಿಸುತ್ತಿವೆ. ಅಸ್ತಿತ್ವದಲ್ಲಿ ಇರುವಂಥ ಜಾತಿ ಸಮೂಹಗಳ ಜನಸಂಖ್ಯೆ, ಅವರ ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿ ಗುರುತಿಸಿ ಬಹಿರಂಗಪಡಿಸುವುದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದ್ದಾರೆ.
‘ಪ್ರತಿ ಜಾತಿಯ ಜನಸಂಖ್ಯೆ ಬಹಿರಂಗವಾದರೆ, ಆ ಸಮುದಾಯಗಳು ರಾಜಕೀಯ, ಸಾಮಾಜಿಕವಾಗಿ ಹೆಚ್ಚು ಜಾಗೃತಗೊಳ್ಳುತ್ತವೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ವಿಷಯದಲ್ಲಿ ನಡೆಯುವ ಸಕಾರಾತ್ಮಕ ಬದಲಾವಣೆಗಳನ್ನು ಸಹಿಸದ ಮತ್ತು ಅದು ತಮ್ಮ ಅಸ್ತಿತ್ವಕ್ಕೆ ಮಾರಕವೆಂದೇ ಅಂದುಕೊಳ್ಳುವ ವೈದಿಕಶಾಹಿಗಳಿಗೆ ಜಾತಿ ಗಣತಿ ಬೇಡದ ಸಂಗತಿ. ಜಾತಿ ಗಣತಿಯಾದರೆ ಯಾರ ಪಾಲು ಯಾರು ಕಬಳಿಸುತ್ತಿದ್ದಾರೆ ಎಂಬ ಅಂಶ ಬಹಿರಂಗವಾಗುವುದರಿಂದ ಅದಕ್ಕೆ ತಣ್ಣನೆಯ ವಿರೋಧ ಮತ್ತು ತಿರಸ್ಕಾರ ವ್ಯಕ್ತವಾಗುತ್ತಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಸಮಾನ ಅವಕಾಶಗಳನ್ನು ಪಡೆದುಕೊಳ್ಳಲು ಮತ್ತು ತಮ್ಮ ಸಮುದಾಯದ ಜನಸಂಖ್ಯೆ ಹಾಗೂ ಅವರ ಸಾಮಾಜಿಕ ಮತ್ತು ಶೈಕ್ಷಣಿಕ ಪರಿಸ್ಥಿತಿಯನ್ನು ಅರಿತು ಜಾಗೃತಗೊಂಡು ಸಾಮಾಜಿಕ ನ್ಯಾಯವನ್ನು ಸಾಧಿಸಿಕೊಳ್ಳಲು ಎಲ್ಲ ತಳವರ್ಗಗಳಿಗೆ ಜಾತಿ ಗಣತಿ ಅವಶ್ಯಕವಾಗಿದೆ’ ಎಂದು ಅವರು ಪ್ರತಿಪಾದಿಸಿದ್ದಾರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.