ADVERTISEMENT

‘ಕಾನ್‌ಸ್ಟಿಟ್ಯೂಷನ್‌ ಕ್ಲಬ್‌’ ನಿರ್ಮಾಣಕ್ಕೆ ನಿರ್ಧಾರ: ಕಾಗೇರಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 8:55 IST
Last Updated 4 ಅಕ್ಟೋಬರ್ 2021, 8:55 IST
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ    

ಬೆಂಗಳೂರು: ‘ದೆಹಲಿ ಮಾದರಿಯಲ್ಲಿ ರಾಜ್ಯದಲ್ಲಿಯೂ ‘ಕಾನ್‌ಸ್ಟಿಟ್ಯೂಷನ್‌ ಕ್ಲಬ್‌’ (ಶಾಸಕರ ಮತ್ತು ಮಾಜಿ ಶಾಸಕರ ಮನರಂಜನಾ ಕ್ಲಬ್‌) ನಿರ್ಮಾಣಕ್ಕೆ ಸಿದ್ದತೆ ನಡೆಸಲಾಗಿದೆ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಪಾರಂಪರಿಕ ಕಟ್ಟಡವಾದ ಬಾಲಬ್ರೂಯಿ ಜಾಗದಲ್ಲಿ ‘ಕಾನ್‌ಸ್ಟಿಟ್ಯೂಷನ್‌ ಕ್ಲಬ್‌’ ಮಾಡಲು ನಿರ್ಣಯಿಸಲಾಗಿದೆ’ ಎಂದರು.

ಆದರೆ, ‘ಪಾರಂಪರಿಕ ಕಟ್ಟಡದ ಸ್ವರೂಪಕ್ಕೆ ಯಾವುದೇ ಧಕ್ಕೆ ಆಗದಂತೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ’ ಎಂದೂ ಅವರು ಸ್ಪಷ್ಟಪಡಿಸಿದರು.

ADVERTISEMENT

‘ಸೆ. 13ರಿಂದ 24ರವರೆಗೆ ಅಧಿವೇಶನ ಬಹಳ ಚಂದವಾಗಿ ನಡೆದಿದೆ. ಇನ್ನೂ ಸ್ವಲ್ಪ ದಿನ ಅದಿವೇಶನ ನಡೆಯಬೇಕು ಎಂಬುದು ಎಲ್ಲರ ಅಭಿಪ್ರಾಯ ಆಗಿತ್ತು’ ಎಂದರು.

‘10 ದಿನಗಳ ಈ ಅಧಿವೇಶನದಲ್ಲಿ 150 ಪ್ರಶ್ನೆಗಳಲ್ಲಿ 146 ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. ಶೂನ್ಯವೇಳೆ, ಗಮನ ಸೆಳೆಯುವ ಪ್ರಶ್ನೆಗಳು ಸೇರಿದಂತೆ ಎಲ್ಲವೂ ಸುಸೂತ್ರವಾಗಿ ಆಗಿದೆ. 19 ಮಸೂದೆಗಳು ಅಂಗೀಕಾರ ಆಗಿದೆ. ಮಸೂದೆಗಳ ಬಗ್ಗೆ ಪರ ವಿರೋಧದ ಚರ್ಚೆಯೂ ಆಗಿದೆ’ ಎಂದರು.

‘ಸರ್ಕಾರ ಸದನವನ್ನು ಗಂಭೀರವಾಗಿ ಪರಿಗಣಿಸಿದೆ. ಮುಖ್ಯಮಂತ್ರಿ ಸಹಿತ ಎಲ್ಲಾ ಸಚಿವರೂ ಹಾಜರಿದ್ದರು. ಧರಣಿ ಮಾಡದಿರುವ ನಿರ್ಣಯವನ್ನು ವಿರೋಧ ಪಕ್ಷ ಕಾಂಗ್ರೆಸ್‌ನವರು ಮಾಡಿದ್ದರು. ಜೆಡಿಎಸ್‌ನವರು ಕೂಡ ತಮ್ಮ ನಿಲುವು ವ್ಯಕ್ತಪಡಿಸಿದ್ದರು. ಹೀಗಾಗಿ ಕಲಾಪದ ಸಮಯ ವ್ಯರ್ಥ ಆಗಿಲ್ಲ. ಇದು

‘ಉಭಯ ಸದನಗಳನ್ನ ಉದ್ದೇಶಿಸಿ, ಸಂಸದೀಯ ಮೌಲ್ಯಗಳ ಬಗ್ಗೆ ಲೋಕಸಭಾಧ್ಯಕ್ಷ ಓಂ ಬಿರ್ಲಾ ಮಾತನಾಡಿದ್ದಾರೆ. ಇದೊಂದು ಮೈಲಿಗಲ್ಲು. ವ್ಯವಸ್ಥೆಯನ್ನು ಉತ್ತಮ ಪಡಿಸಲು ಓಂ ಬಿರ್ಲಾ ಮಾತನಾಡಿದ್ದಾರೆ. ಕಾಂಗ್ರೆಸ್ ನವರು ಭಾಗಿಯಾಗಲು, ಮನವೊಲಿಸುವ ಕೆಲಸ ಮಾಡಿದೆ. ಆದರೆ ಕಾಂಗ್ರೆಸ್‌ನವರು ಒಪ್ಪಲಿಲ್ಲ. ಕಾಂಗ್ರೆಸ್ ನಾಯಕರು ಭಾಗಿಯಾಗುತ್ತಿದ್ದರೆ ಮತ್ತಷ್ಟು ಮೌಲ್ಯ ಹೆಚ್ಚಾಗ್ತಿತ್ತು’ ಎಂದರು.‌

‘ಮುಂದಿನ ಡಿಸೆಂಬರ್ ತಿಂಗಳ ಅಧಿವೇಶನ ಬೆಳಗಾವಿಯಲ್ಲಿ ನಡೆಸಬೇಕು ಎಂಬ ಚಿಂತನೆ ಇದೆ. ಈ ಬಗ್ಗೆ ಸರ್ಕಾರದ ಗಮನಕ್ಕೂ ತರಲಾಗಿದೆ’ ಎಂದು ಅವರು ಹೇಳಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.