ADVERTISEMENT

ಗಿರಡ್ಡಿ ಇಲ್ಲದ ಭಾವ; ಹಂಚಿಕೊಂಡರು ನೋವ

‘ಡಾ. ಗಿರಡ್ಡಿ ಗೋವಿಂದರಾಜ: ಒಂದು ಸಾಂಸ್ಕೃತಿಕ ನೆನಪು’ ಗೋಷ್ಠಿ

ಇ.ಎಸ್.ಸುಧೀಂದ್ರ ಪ್ರಸಾದ್
Published 18 ಜನವರಿ 2019, 20:00 IST
Last Updated 18 ಜನವರಿ 2019, 20:00 IST
ಡಾ. ಗಿರಡ್ಡಿ ಗೋವಿಂದರಾಜ ಅವರ ಕುರಿತು ಗೋಷ್ಠಿಯಲ್ಲಿ ಸಿ.ಎನ್. ರಾಮಚಂದ್ರನ್ ಮಾತನಾಡಿದರು. ಎಂ.ಜಿ. ಹೆಗಡೆ ಮತ್ತು ಎನ್‌.ಎಸ್. ಗುಂಡೂರ ಇದ್ದಾರೆ
ಡಾ. ಗಿರಡ್ಡಿ ಗೋವಿಂದರಾಜ ಅವರ ಕುರಿತು ಗೋಷ್ಠಿಯಲ್ಲಿ ಸಿ.ಎನ್. ರಾಮಚಂದ್ರನ್ ಮಾತನಾಡಿದರು. ಎಂ.ಜಿ. ಹೆಗಡೆ ಮತ್ತು ಎನ್‌.ಎಸ್. ಗುಂಡೂರ ಇದ್ದಾರೆ   

ಧಾರವಾಡ: ಹಿರಿಯ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ಅವರಿಗೆ ಸಿಗರೇಟು ಎಂದರೆ ಅಚ್ಚುಮೆಚ್ಚು ಎನ್ನುವುದು ಎಲ್ಲರಿಗೂ ತಿಳಿದ ಸಂಗತಿ. ಧಾರವಾಡ ಸಾಹಿತ್ಯ ಸಂಭ್ರಮದ 7ನೇ ಆವೃತ್ತಿಯಲ್ಲಿ ಅವರಿಲ್ಲದ ಭಾವ ಕಾಡುತ್ತಿದ್ದುದು ಒಂದೆಡೆಯಾದರೆ, ಅವರದೇ ಕುರಿತ ಗೋಷ್ಠಿಯಲ್ಲಿ ಬಿಡಿಬಿಡಿಯಾದ ಅವರ ನೆನಪುಗಳು, ಸಿಗರೇಟು ಹೊಗೆಯಂತೆಯೇ ಚದುರಿಹೋದವು.

ಧಾರವಾಡ ಸಾಹಿತ್ಯ ಸಂಭ್ರಮದ ಮೊದಲ ದಿನ ಉದ್ಘಾಟನೆಯಿಂದ ಅಂತ್ಯದವರೆಗೂ ಕಾಡಿದ್ದು ಡಾ. ಗಿರಡ್ಡಿ ಅವರಿಲ್ಲದ ಭಾವ. ಇಡೀ ಆವರಣದೊಳಗೆ ಓಡಾಡಿಕೊಂಡು, ಅಲ್ಲೇ ಮೂಲೆಯಲ್ಲಿ ನಿಂತು ಸಿಗರೇಟು ಸೇದುತ್ತ, ಮಂದಸ್ಮಿತರಾಗಿ ಬಂದವರ ಯೋಗಕ್ಷೇಮ ವಿಚಾರಿಸುತ್ತಿದ್ದ ಗಿರಡ್ಡಿ ಇಲ್ಲವಲ್ಲ ಎಂಬ ಬೇಸರ ಎಲ್ಲರದ್ದೂ.

ಕಳೆದ ಮೇ 11ರಂದು ನಿಧನರಾದ ಡಾ. ಗಿರಡ್ಡಿ ಅವರಿಗೆ ಈ ಬಾರಿಯ ಸಂಭ್ರಮವನ್ನು ಸಮರ್ಪಿಸಲಾಗಿದೆ. ಜತೆಗೆ ಅವರ ಕುರಿತ ‘ಡಾ. ಗಿರಡ್ಡಿ ಗೋವಿಂದರಾಜ: ಒಂದು ಸಾಂಸ್ಕೃತಿಕ ನೆನಪು’ನಲ್ಲೂ ಗಿರಡ್ಡಿ ಅವರು ಒಬ್ಬ ಶಿಕ್ಷಕರಾಗಿ, ಲೇಖಕರಾಗಿ, ವ್ಯಕ್ತಿಯಾಗಿ ಮತ್ತು ಸ್ನೇಹಿತನಾಗಿ ಗಿರಡ್ಡಿ ಅವರನ್ನು ಕಾಣುವ ಪ್ರಯತ್ನವನ್ನು ಅವರ ಶಿಷ್ಯರಾದ ಎನ್‌.ಎಸ್‌.ಗುಂಡೂರ ಅವರು ನೆನಪಿಸಿಕೊಂಡರೆ, ಲೇಖಕರಾಗಿ ಎಂ.ಜಿ.ಹೆಗಡೆ ಸ್ಮರಿಸಿದರು. ಅಂತಿಮವಾಗಿ ಗೋಷ್ಠಿಯ ನಿರ್ದೇಶಕ ಸಿ.ಎನ್.ರಾಮಚಂದ್ರನ್ ಅವರೊಂದಿಗಿನ ಒಡನಾಟವನ್ನು ನೆನಪಿಸಿಕೊಂಡರು.

ADVERTISEMENT

‘ಶಿಕ್ಷಣ ಹಾಗೂ ಶಿಕ್ಷಕರ ಬಿಕ್ಕಟ್ಟು, ಸಾಹಿತ್ಯ ಮತ್ತು ಸಾಂಸ್ಕೃತಿಕ ಬಿಕ್ಕಟ್ಟುಗಳ ಇರುವ ಈ ಹೊತ್ತಿನಲ್ಲಿ ಗಿರಡ್ಡಿ ಅವರನ್ನು ನೆನೆಯುವುದು ಅತ್ಯಂತ ಜರೂರು. ಡಾ. ಗಿರಡ್ಡಿ ಅವರ ಶಿಕ್ಷಕರು ಮಾತ್ರವಲ್ಲ, ಮಾರ್ಗದರ್ಶಕರಾಗಿದ್ದರು’ ಎಂದು ಎನ್‌.ಎಸ್‌. ಗುಂಡೂರ ಕಲಿಸಿದ ಗುರುವನ್ನು ಸ್ಮರಿಸಿದರು.

‘ಮಾಸ್ತಿ ಅವರನ್ನು ಅ.ನ.ಕೃ. ಎಂದಿಗೂ ಒಪ್ಪಲಿಲ್ಲ. ಆದರೆ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅವರು ಸದಾ ಗೌರವಿಸಿದರು. ಹಿಂದಿನ ಸಂಭ್ರಮದಲ್ಲಿ ಗಿರಡ್ಡಿ ಅವರು ಮಧ್ಯಮ ಮಾರ್ಗದ ಕುರಿತು ಮಾತನಾಡಿ, ಇಲ್ಲಿ ಎಲ್ಲಾ ಪಂಥದವರನ್ನು ಆಹ್ವಾನಿಸುತ್ತೇವೆ. ಮುಕ್ತ ಚರ್ಚೆಯ ಮೂಲಕ ಅವರವರು ಅನುಸರಿಸುವ ಪಂಥಗಳ ಕುರಿತು ಖಚಿತ ನಿಲುವ ತಾಳಲು ಸಂಭ್ರಮ ನೆರವಾಗುತ್ತದೆ ಎಂದಿದ್ದರು. ಆದರೆ ಮಧ್ಯಮ ಮಾರ್ಗ ಎಂದಿದ್ದು ಮಾತ್ರ ಉಳಿಯಿತು’ ಎಂದು ಹೇಳಿದರು.

ಗೋಷ್ಠಿ ನಿರ್ದೇಶಕ ಸಿ.ಎನ್. ರಾಮಚಂದ್ರನ್, ‘ನಮ್ಮನ್ನು ಇತರರಿಗಿಂತ ಭಿನ್ನರಾಗಿ ಕಾಣದೆ, ಇತರರೊಡನೆ ಸಮೀಕರಿಸಿ ನೋಡುವ ಶ್ರೇಷ್ಠ ಭಾವ ಗಿರಡ್ಡಿ ಅವರಲ್ಲಿತ್ತು. ಜನನ, ಮರಣ, ಸಾವು, ಪ್ರೀತಿ, ಸ್ನೇಹ ಎಲ್ಲವನ್ನೂ ಒಳಗೊಂಡ ‘ಮಣ್ಣು’ ಕೃತಿ ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿದೆ. ಹಾಗೆಯೇ ‘ಮರ್ಲಿನ್ ಮನ್ರೋ’ ಎಂಬ ಕವನ ಸಂಕಲನದಲ್ಲಿ ಅವರು ಹಿಡಿದಿಟ್ಟ ಭಾವ ಹೆಚ್ಚು ಆಪ್ತವಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.