ಬೆಂಗಳೂರು: ‘ಒಂದರಿಂದ ಎಂಟನೇ ತರಗತಿವರೆಗೆ ಶಾಲೆಗಳನ್ನು ತೆರೆಯದ ರಾಜ್ಯ ಸರ್ಕಾರದ ನಿರ್ಧಾರ ಅವೈಜ್ಞಾನಿಕ, ಸಂವಿಧಾನ ಬಾಹಿರ’ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ ಅಭಿಪ್ರಾಯಪಟ್ಟಿದ್ದಾರೆ.
‘ಇದು ಸಮಾಜದಲ್ಲಿ ಅಂಚಿನಲ್ಲಿರುವ ಅವಕಾಶ ವಂಚಿತ ಗುಂಪುಗಳ ಮಕ್ಕಳ ಮೇಲೆ ಅನ್ಯಾಯದ ಹೊಡೆತ’ ಎಂದೂ ಹೇಳಿದ್ದಾರೆ.
‘ಇಂದು ಮಾಲ್ಗಳು, ಈಜುಕೊಳಗಳು, ಚಿತ್ರಮಂದಿರಗಳು ತೆರೆದಿವೆ. ಎಲ್ಲ ಆರ್ಥಿಕ ಚಟುವಟಿಕೆಗೆ ಅನುಮತಿ ನೀಡಲಾಗಿದೆ. ಇವು ಸರ್ಕಾರಕ್ಕೆ ಮೌಲ್ಯಯುತ. ಶಾಲೆಗಳನ್ನು ಮಾತ್ರ ಮುಚ್ಚುವ ಮೂಲಕ, ಈ ಮಕ್ಕಳ ಜೀವನವು ನಮಗೆ ಮುಖ್ಯವಲ್ಲ, ಮೌಲ್ಯಯುತವಲ್ಲವೆಂದು ಸರ್ಕಾರ ತೀರ್ಮಾನಿಸಿದೆ’ ಎಂದೂ ಟೀಕಿಸಿದ್ದಾರೆ.
‘ಮಧ್ಯಮ ವರ್ಗದ ಮಕ್ಕಳಿಗೆ ಪೋಷಕರು, ಮನೆ, ಶಿಕ್ಷಕರು, ಶಾಲೆಗಳಿಂದ ಕಲಿಕೆಯ ಅವಕಾಶಗಳು ಸಿಗುತ್ತವೆ. ಆದರೆ, ಬಡವರ್ಗದ ಮಕ್ಕಳು ಅಧಿಕಾರದಲ್ಲಿರುವವರ ಉದಾಸೀನತೆಗೆ ಬೆಲೆ ತೆರುವಂತಾಗಿದೆ. ಜ. 31ರ ಮೊದಲು ಅಂಗನವಾಡಿ ತೆರೆಯಲು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಆದರೆ, ರಾಜ್ಯ ಸರ್ಕಾರ ಅವೈಜ್ಞಾನಿಕ ತಾರ್ಕಿಕತೆಯ ಆಧಾರದಲ್ಲಿ ಒಂದರಿಂದ ಎಂಟರವರೆಗಿನ ತರಗತಿಗಳನ್ನು ತೆರೆಯಲು ಹಿಂಜರಿಯುತ್ತಿದೆ’ ಎಂದೂ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.