ಭಟ್ಕಳ: ‘ಸಮುದ್ರದ ದೋಣಿಯೊಂದರಲ್ಲಿ ಬಂಧಿತರಾಗಿರುವ ನಾವು, ನಿತ್ಯ ಚಿತ್ರಹಿಂಸೆ ಅನುಭವಿಸುತ್ತಿದ್ದೇವೆ. ಈ ಹಿಂಸಾಕೂಪದಿಂದ ನಮ್ಮನ್ನು ಮುಕ್ತಗೊಳಿಸಿ...’
ಇರಾನ್ ಜಲಗಡಿಯನ್ನು ಅಕ್ರಮವಾಗಿ ಪ್ರವೇಶ ಮಾಡಿದ ಆರೋಪದಡಿ, ನಾಲ್ಕು ತಿಂಗಳ ಹಿಂದೆ ಇರಾನ್ನಲ್ಲಿ ಬಂಧನಕ್ಕೀಡಾಗಿರುವ, ತಾಲ್ಲೂಕಿನ 18 ಮೀನುಗಾರರು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಈ ಮೇಲಿನಂತೆ ಮನವಿ ಮಾಡಿಕೊಳ್ಳುತ್ತಿರುವ ವಿಡಿಯೊ ಇದೀಗ ತಾಲ್ಲೂಕಿನಲ್ಲಿ ವಾಟ್ಸ್ ಆ್ಯಪ್ ಗ್ರೂಪ್ಗಳಲ್ಲಿ ಹರಿದಾಡುತ್ತಿದೆ.
ತಾಲ್ಲೂಕಿನ ಹೆಬಳೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತೆಂಗಿನಗುಂಡಿ ನಿವಾಸಿ ಉಸ್ಮಾನ್ ಇಸ್ಹಾಕ್ ಬೊಂಬಾಯಿಕರ್, ತಮ್ಮ ಜತೆಯಲ್ಲಿರುವ ಸುಮಾರು 18 ಮೀನುಗಾರರೊಂದಿಗೆ, ತಾವಿರುವ ಸ್ಥಳದಿಂದ ಭಾನುವಾರ ರಾತ್ರಿ ವಿಡಿಯೊ ಚಿತ್ರೀಕರಿಸಿ ಹಲವು ವಾಟ್ಸ್ಆ್ಯಪ್ ಸಂಖ್ಯೆಗಳಿಗೆ ಕಳುಹಿಸಿದ್ದಾರೆ.
‘ನಮ್ಮನ್ನು ಬಂಧನದಲ್ಲಿಟ್ಟಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ. ಕಷ್ಟದಿಂದ ನೀವು ಪಾರು ಮಾಡುತ್ತೀರಿ ಎಂಬ ನಂಬಿಕೆ ನಮಗಿದೆ’ ಎಂದು ಅವರು ವಿಡಿಯೊದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಂಧಿತರಲ್ಲಿ ಭಟ್ಕಳ, ಕುಮಟಾ, ಹೊನ್ನಾವರ ತಾಲ್ಲೂಕಿನ ಹಾಗೂ ಉಡುಪಿ ಜಿಲ್ಲೆ ಶಿರೂರಿನ ಮೀನುಗಾರರು ಸೇರಿದ್ದಾರೆ.
‘ಪತಿ ತೀರಿಕೊಂಡ ಬಳಿಕ ಮಗನು ಕುಟುಂಬದ ಹೊರೆ ಹೊತ್ತಿದ್ದ; ನಾಲ್ಕು ತಿಂಗಳಿನಿಂದ ತಾನು ಮಾಡದ ತಪ್ಪಿಗಾಗಿ ಶಿಕ್ಷೆ ಅನುಭವಿಸುತ್ತಿದ್ದಾನೆ’ ಎಂದು ಗೃಹಬಂಧನದಲ್ಲಿರುವ ಭಟ್ಕಳದ ತೆಂಗಿನಗುಂಡಿಯ ಉಸ್ಮಾನ್ ಬೊಂಬಾಯಿಕರ್ ತಾಯಿ ಬೀಬಿ ಆಯಿಶಾ ಅಳಲು ತೋಡಿಕೊಂಡರು.
**
ಸಚಿವೆ ಸುಷ್ಮಾಗೆ ಮನವಿ
‘ಬಂಧಿತ ಮೀನುಗಾರರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿ ಕರೆತರುವಂತೆ ಕ್ರಮ ಕೈಗೊಳ್ಳಬೇಕು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಈಗಾಗಲೇ ತಂಝೀಮ್ನಿಂದ ಮನವಿ ಮಾಡಲಾಗಿದೆ. ಜತೆಗೆ, ರಾಜ್ಯ ಸರ್ಕಾರದ ಮೇಲೂ ಒತ್ತಡ ಹೇರಲಾಗಿದೆ’ ಎಂದು ಸ್ಥಳೀಯ ತಂಝೀಮ್ ಉಪಾಧ್ಯಕ್ಷ ಇನಾಯತ್ ಉಲ್ಲಾ ಶಾಬಂದ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.
**
ಮೀನುಗಾರರ ಮೊಬೈಲ್ಗೆ ಧ್ವನಿ ಸಂದೇಶ ಕಳುಹಿಸಿದ್ದೇವೆ. ಅವರು ಪ್ರತಿಕ್ರಿಯಿಸಿದ ನಂತರ ವಿದೇಶಾಂಗ ಸಚಿವಾಲಯದ ಮೂಲಕ ಸಂಪರ್ಕಿಸಲು ಪ್ರಯತ್ನಿಸುತ್ತೇವೆ
ಎಸ್.ಎಸ್.ನಕುಲ್, ಜಿಲ್ಲಾಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.