ಚಿತ್ರದುರ್ಗ: ‘ಡ್ರಗ್ಸ್ ಮಾಫಿಯಾದಲ್ಲಿ ತೊಡಗಿರುವ ದುಷ್ಕರ್ಮಿಗಳು ಯಾರೇ ಆಗಿದ್ದರೂ ರಾಷ್ಟ್ರದ್ರೋಹಿಗಳೇ ಹೌದು. ಅಂಥವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು’ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಒತ್ತಾಯಿಸಿದರು.
ಡ್ರಗ್ಸ್ ವಿರುದ್ಧ ಎಬಿವಿಪಿ ಆಯೋಜಿಸಿದ್ದ ಸಹಿ ಸಂಗ್ರಹ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಿದ ಅವರು, ‘ಡ್ರಗ್ಸ್ ದಂಧೆ ಗಡಿಗಳನ್ನು ಮೀರಿ ವಿಶ್ವವನ್ನೇ ವ್ಯಾಪಿಸಿದೆ. ದೇಶ ಮತ್ತು ರಾಜ್ಯದೊಳಗೆ ಒಳಸಂಚಿನಿಂದ ನುಸುಳಿರುವುದನ್ನು ಗಮನಿಸಿದರೆ ದೊಡ್ಡ ಜಾಲವೇ ಇದ್ದು, ತಪ್ಪಿತಸ್ಥರನ್ನು ಕಾರ್ಯಾಂಗ ಮತ್ತು ನ್ಯಾಯಾಂಗವು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಆಗ್ರಹಿಸಿದರು.
‘ದೇಶವನ್ನು ಸದೃಢವಾಗಿ ಕಟ್ಟಲು ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ಮಾನವ ಸಂಪನ್ಮೂಲ ಅತಿಮುಖ್ಯ. ಅದರಲ್ಲೂ ಯುವಶಕ್ತಿಯ ಪಾತ್ರ ಹೆಚ್ಚು. ಆದರೆ, ಅವರನ್ನೇ ಗುರಿಯಾಗಿಸಿಕೊಂಡು ಡ್ರಗ್ಸ್ ಮೂಲಕ ಭಾರತವನ್ನು ದುರ್ಬಲಗೊಳಿಸಲು ಹೊಂಚು ರೂಪಿಸಲಾಗಿದೆ’ ಎಂದು ಆರೋಪಿಸಿದರು.
‘ಯುವಸಮೂಹವನ್ನು ವ್ಯಸನಿಗಳನ್ನಾಗಿ ಮಾಡಿ, ಪ್ರಚೋದಿಸುವ ಮೂಲಕ ಅವರಿಂದ ದೇಶದ್ರೋಹದ ಕೆಲಸಗಳನ್ನು ಮಾಡಿಸಲಾಗುತ್ತಿದೆ. ದುರ್ಬಳಕೆ ಮಾಡಿಕೊಂಡು ದೇಶ ಸಡಿಲಗೊಳಿಸುವ ಕಾರ್ಯ ಒಳಗೊಳಗೇ ನಡೆಯುತ್ತಿದೆ. ಇಂತಹ ದಂಧೆಯಲ್ಲಿರುವ ಸಂಘಟನೆ–ಗುಂಪಿನವರು ಎಷ್ಟೇ ಪ್ರಭಾವಿಗಳಾದರೂ ಭೇದಿಸುವ ಮೂಲಕ ಸರ್ಕಾರ ಕಠಿಣ ಶಿಕ್ಷೆಗೆ ಗುರಿಪಡಿಸಿ, ವ್ಯಸನಮುಕ್ತ ರಾಷ್ಟ್ರ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.