ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಇಲ್ಲಿನ ‘ಧವಳಗಿರಿ’ ಮನೆಯಲ್ಲಿ ಭಾನುವಾರ ಬೆಳಿಗ್ಗೆ ಸುದರ್ಶನ ಹೋಮ ಮತ್ತು ನರಸಿಂಹ ಹೋಮ ನಡೆಯಿತು.
ವಿಧಾನಸಭೆ ಉಪಚುನಾವಣೆಯಲ್ಲಿ ಗರಿಷ್ಠ ಸ್ಥಾನ ಗೆದ್ದರೆ, ಆ ಮೂಲಕ ಸರ್ಕಾರ ಸ್ಥಿರಗೊಂಡರೆ ಮನೆಯಲ್ಲೇ ಈ ಎರಡು ಹೋಮಗಳನ್ನು ನಡೆಸುವ ಹರಕೆಯನ್ನು ಯಡಿಯೂರಪ್ಪ ಹೊತ್ತಿದ್ದರು ಎಂದು ಹೇಳಲಾಗಿದೆ. ಹೀಗಾಗಿ ಪುತ್ರ ಬಿ.ವೈ.ವಿಜಯೇಂದ್ರ ದಂಪತಿ ಸಹಿತ ಈ ಹೋಮ ನಡೆಸಿದರು.ಕುಟುಂಬದ ಪುರೋಹಿತರ ಹೊರತಾಗಿ ಮನೆಯಲ್ಲಿ ಬೇರೆ ಯಾರೂ ಇರಲಿಲ್ಲ. ಸುಮಾರು ಮೂರು ಗಂಟೆ ಕಾಲ ಈ ಧಾರ್ಮಿಕ ವಿಧಿ ವಿಧಾನಗಳು ನಡೆದವು.
ಅತ್ಯಂತ ಖಾಸಗಿಯಾಗಿ ನಡೆದ ಈ ಹೋಮದಿಂದ ಆಪ್ತ ಸಚಿವರು, ಶಾಸಕರು, ಕಾರ್ಯದರ್ಶಿಗಳನ್ನುಸಹ ದೂರ ಇಡಲಾಗಿತ್ತು. ಮುಖ್ಯವಾಗಿ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಬಿಜೆಪಿಗೆ ವಿಜಯ ದೊರಕಲು ಪ್ರಮುಖ ಕಾರಣವಾಗಿರುವ ಪುತ್ರ ವಿಜಯೇಂದ್ರನಿಗೆ ಎದುರಾಗಿರಬಹುದಾದ ಶತ್ರು ಕಾಟವನ್ನು ನಿವಾರಿಸುವುದು ಸಹ ಸುದರ್ಶನ ಹೋಮ ನಡೆಸಿದ್ದಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.