ಬೆಂಗಳೂರು: ಜುಲೈ 30 ಮತ್ತು 31ರಂದು ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ನಡೆಸುವ ನಿರ್ಧಾರದ ಬಗ್ಗೆ ಮರು ಪರಿಶೀಲನೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಎರಿಕ್ ಇ ಸ್ಟೀಫನ್ಸ್ ಮತ್ತು ಅಬ್ದುಲ್ ಮನ್ನನ್ ಖಾನ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ವಿಭಾಗೀಯ ಪೀಠ, ‘ಬುಧವಾರ ಮಧ್ಯಾಹ್ನ 2.30ರೊಳಗೆ ಸರ್ಕಾರ ತನ್ನ ನಿರ್ಧಾರ ತಿಳಿಸಬೇಕು’ ಎಂದು ಹೇಳಿದೆ.
‘ಅರ್ಜಿದಾರರು ತಡವಾಗಿ ಅರ್ಜಿ ಸಲ್ಲಿಸಿದ್ದಾರೆ ಮತ್ತು ನ್ಯಾಯಾಲಯವನ್ನು ಸಂಪರ್ಕಿಸುವ ಮೊದಲು ಸೂಕ್ತ ಪ್ರಾಧಿಕಾರವನ್ನು ಸಂಪರ್ಕಿಸಿಲ್ಲ. ಆದರೂ, ವಿಷಯದ ಗಂಭೀರತೆ ಪರಿಗಣಿಸಿ ನ್ಯಾಯಾಲಯ ಸ್ಪಷ್ಟೀಕರಣ ಬಯಸುತ್ತಿದೆ.ಪರೀಕ್ಷೆಗೆ ಹಾಜರಾಗಲು ಆಗದಿದ್ದರೆ ಮತ್ತೆ ಅವಕಾಶ ಪಡೆಯಲು ಇದು ಎಸ್ಎಸ್ಎಲ್ಸಿ ಪರೀಕ್ಷೆ ಅಲ್ಲ’ ಎಂದು ಪೀಠ ಮೌಖಿಕವಾಗಿ ಅಭಿಪ್ರಾಯಪಟ್ಟಿತು.
‘ಬೆಂಗಳೂರಿನಲ್ಲೇ 5 ಸಾವಿರಕ್ಕೂ ಹೆಚ್ಚು ಕಂಟೈನ್ಮೆಂಟ್ ವಲಯಗಳಿವೆ. ಏಪ್ರಿಲ್ 20ರ ಎಸ್ಒಪಿ (ಮಾರ್ಗದರ್ಶಿ ಸೂತ್ರಗಳು) ಪ್ರಕಾರ ಕಂಟೈನ್ಮೆಂಟ್ ವಲಯದಿಂದ ಹೊರ ಬರಲು ಯಾರೊಬ್ಬರಿಗೂ ಅವಕಾಶ ಇಲ್ಲ. ಹೀಗಾಗಿ, ಸರ್ಕಾರ ಕೂಡಲೇ ಪ್ರತಿಕ್ರಿಯಿಸಬೇಕು’ ಎಂದು ಪೀಠ ಹೇಳಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.