ಕಂಪ್ಲಿ(ಬಳ್ಳಾರಿ ಜಿಲ್ಲೆ): ಚಿರತೆ ದಾಳಿಗೆ ತಾಲ್ಲೂಕಿನ ದೇವಲಾಪುರ ಗ್ರಾಮದ ಕರಿಗುಡ್ಡ ಪ್ರದೇಶದಲ್ಲಿ ಮಂಗಳವಾರ ಬಾಲಕಿ ಬಲಿಯಾಗಿದ್ದು, ಎರಡು ವಾರದೊಳಗೆ ತಾಲ್ಲೂಕಿನಲ್ಲಿ ಚಿರತೆ ದಾಳಿಗೆ ಇಬ್ಬರು ಬಲಿಯಾದಂತಾಗಿದೆ.
ಗ್ರಾಮದ ಕಾರಿಗನೂರು ಪಂಪಾಪತಿ–ವನಜಾಕ್ಷಿ ದಂಪತಿಯ ಎರಡನೇ ಮಗಳು ಜಯಸುಧಾ (9) ಮೃತ ಬಾಲಕಿ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಳು. ಕ್ರಿಸ್ಮಸ್ ನಿಮಿತ್ತ ಮಂಗಳವಾರ ಶಾಲೆಗೆ ರಜೆ ಇದ್ದದ್ದರಿಂದ ತಾಯಿಯೊಂದಿಗೆ ಮಗಳು ಹೊಲಕ್ಕೆ ಹೋಗಿದ್ದಾಳೆ.
ತಾಯಿ ಹತ್ತಿ ಹೊಲದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಅಲ್ಲಿಯೇ ಇದ್ದ ಜಯಸುಧಾ ಮೇಲೆ ಚಿರತೆ ಎರಗಿದೆ. ಅದನ್ನು ನೋಡಿ ವನಜಾಕ್ಷಿ ಕಿರುಚಾಡಿದ್ದಾರೆ. ಅದನ್ನು ಕಂಡ ರೈತರು, ಕೃಷಿ ಕೂಲಿ ಕಾರ್ಮಿಕರು ಧಾವಿಸಿ, ಚಿರತೆ ಮೇಲೆ ಕಲ್ಲು ಎಸೆದಿದ್ದಾರೆ. ಅದರಿಂದ ಹೆದರಿದ ಚಿರತೆ ಜಯಸುಧಾ ದೇಹವನ್ನು ಅಲ್ಲಿಯೇ ಬಿಟ್ಟು ಹೋಗಿದೆ. ಕಂಪ್ಲಿ ಆಸ್ಪತ್ರೆಗೆ ಕರೆದೊಯ್ಯು ಮಾರ್ಗ ಮಧ್ಯೆ ಬಾಲಕಿ ಅಸುನೀಗಿದ್ದಾಳೆ.
ಡಿ. 11ರಂದು ದೇವಲಾಪುರಕ್ಕೆ ಹೊಂದಿಕೊಂಡಿರುವ ಸೋಮಲಾಪುರದಲ್ಲಿ ಮೂರು ವರ್ಷದ ಬಾಲಕ ವೆಂಕಟಸ್ವಾಮಿಯನ್ನು ಚಿರತೆ ಕೊಂದು ಹಾಕಿತ್ತು. ನಂತರ ಅರಣ್ಯ ಇಲಾಖೆ ಬೋನು ಇಟ್ಟಿತ್ತು. ಡಿ. 21ರಂದು ಎರದಮಟ್ಟಿ ಚೆಕ್ ಡ್ಯಾಂ ಬಳಿಯ ಬೋನಿನಲ್ಲಿ ಚಿರತೆ ಸೆರೆಯಾಗಿತ್ತು. ಚಿರತೆ ಸಿಕ್ಕಿದ್ದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದರು. ಆದರೆ, ಮಂಗಳವಾರ ನಡೆದ ಘಟನೆಯಿಂದ ಗ್ರಾಮಸ್ಥರು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಷ ವ್ಯಕ್ತಪಡಿಸಿದ್ದಾರೆ.
2ನೇ ಘಟನೆ
ಹದಿನೈದು ದಿನಗಳ ಹಿಂದೆಯಷ್ಟೇ (ಡಿ.11) ಸೋಮಲಾಪುರದಲ್ಲಿ ಮೂರು ವರ್ಷದ ಬಾಲಕ ವೆಂಕಟಸ್ವಾಮಿಯನ್ನು ಚಿರತೆಯೊಂದು ಹೊತ್ತೊಯ್ದು ಕೊಂದುಹಾಕಿತ್ತು. ನಂತರ ಅರಣ್ಯ ಇಲಾಖೆ ಈ ಪ್ರದೇಶದಲ್ಲಿ ಬೋನು ಇಟ್ಟಿತ್ತು. ಅದಾದ ಬಳಿಕ, ಹಳೇದರೋಜಿಯ ಬಳಿ ಚಿರತೆಯೊಂದನ್ನು ಕಂಡು ಶಾಲಾ ಬಾಲಕಿಯೊಬ್ಬಳು ಎಚ್ಚರ ತಪ್ಪಿ ಬಿದ್ದಿದ್ದಳು.
ಡಿ. 21ರಂದು ಎರದಮಟ್ಟಿ ಚೆಕ್ ಡ್ಯಾಂ ಬಳಿಯ ಬೋನಿನಲ್ಲಿ ಚಿರತೆ ಸೆರೆಯಾಗಿತ್ತು. ಆದ್ದರಿಂದ ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದರು. ಆದರೆ, ಮಂಗಳವಾರದ ಘಟನೆಯಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.