ರಾಮನಗರ: ಮಹಿಳೆಯನ್ನು ಹತ್ಯೆ ಮಾಡಿ ಆಕೆಯ ಚಿನ್ನಾಭರಣ ದೋಚಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ₹ 50 ಸಾವಿರ ದಂಡ ವಿಧಿಸಿ ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮಂಗವಾರ ಆದೇಶ ನೀಡಿತು.
ಚನ್ನಪಟ್ಟಣ ತಾಲ್ಲೂಕಿನ ಮೊಳೆದೊಡ್ಡಿ ಗ್ರಾಮದ ರವೀಂದ್ರ ಶಿಕ್ಷೆಗೆ ಒಳಗಾದವರು. 2015ರ ಆಗಸ್ಟ್ 20ರಂದು ಅವರು ತಮ್ಮ ಗ್ರಾಮದವರೇ ಆದ ಗಂಗಮ್ಮ ಎಂಬುವರನ್ನು ಹತ್ಯೆ ಮಾಡಿದ್ದರು. ಗ್ರಾಮಕ್ಕೆ ಸಮೀಪದ ಕಾಡಿನಲ್ಲಿ ಗಂಗಮ್ಮ ಜಾನುವಾರು ಮೇಯಿಸಲು ತೆರಳಿದ ಸಂದರ್ಭ ಅವರನ್ನು ಹಿಂಬಾಲಿಸಿದ್ದ ಆರೋಪಿಯು ಮಚ್ಚು ತೋರಿಸಿ ಆಕೆಯ ಒಡವೆಗಳನ್ನು ದೋಚಲು ಯತ್ನಿಸಿದ್ದರು. ಅದಕ್ಕೆ ಆಕೆ ಪ್ರತಿರೋಧ ಒಡ್ಡಿದಾಗ ಕತ್ತು ಕೊಯ್ದು ಹತ್ಯೆ ಮಾಡಿದ್ದರು. ಬಳಿಕ ಆಕೆಯ ಮೈ ಮೇಲಿನ ಚಿನ್ನಾಭರಣ ಹಾಗೂ ಮೊಬೈಲ್ ಅನ್ನು ತೆಗೆದುಕೊಂಡು ಪರಾರಿಯಾಗಿದ್ದರು.
ಚನ್ನಪಟ್ಟಣ ತಾಲ್ಲೂಕಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಗೋಪಾಲಕೃಷ್ಣ ರೈ ಮಂಗಳವಾರ ಶಿಕ್ಷೆ ಪ್ರಮಾಣ ಪ್ರಕಟಿಸಿದರು.
ಪ್ರಕರಣದಲ್ಲಿ ಆರೋಪಿಯಾಗಿದ್ದ ಬಾಲಕನನ್ನು ಖುಲಾಸೆ ಮಾಡಲಾಗಿತ್ತು. ಸರ್ಕಾರದ ಪರವಾಗಿ ಅಭಿಯೋಜಕ ಎಂ.ಡಿ. ರಘು ವಾದ ಮಂಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.