ADVERTISEMENT

ಮದ್ಯ ನಿಷೇಧಕ್ಕೆ ಮಹಿಳೆಯರ ಪಾದಯಾತ್ರೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 13:16 IST
Last Updated 19 ಜನವರಿ 2019, 13:16 IST
ಮದ್ಯ ನಿಷೇಧ ಮಾಡುವಂತೆ ಆಗ್ರಹಿಸಿ ಸಾವಿರಾರು ಮಹಿಳೆಯರು ಚಿತ್ರದುರ್ಗದಿಂದ ಶನಿವಾರ ಪಾದಯಾತ್ರೆ ಹೊರಟರು
ಮದ್ಯ ನಿಷೇಧ ಮಾಡುವಂತೆ ಆಗ್ರಹಿಸಿ ಸಾವಿರಾರು ಮಹಿಳೆಯರು ಚಿತ್ರದುರ್ಗದಿಂದ ಶನಿವಾರ ಪಾದಯಾತ್ರೆ ಹೊರಟರು   

ಚಿತ್ರದುರ್ಗ: ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧಕ್ಕೆ ಒತ್ತಾಯಿಸಿ ಎರಡು ಸಾವಿರ ಮಹಿಳೆಯರು ಚಿತ್ರದುರ್ಗದಿಂದ ಬೆಂಗಳೂರಿಗೆ ಶನಿವಾರ ಪಾದಯಾತ್ರೆ ಆರಂಭಿಸಿದರು. ಮದ್ಯಪಾನದಿಂದ ಸಮಸ್ಯೆಗೆ ಸಿಲುಕಿದ ಕುಟುಂಬಗಳ ಸದಸ್ಯರು 203 ಕಿ.ಮೀ ಪಾದಯಾತ್ರೆಯಲ್ಲಿ ಸ್ವಯಂಪ್ರೇರಿತವಾಗಿ ಹೆಜ್ಜೆಹಾಕಿದರು.

‘ಮದ್ಯ ನಿಷೇಧ ಆಂದೋಲನ’ ಸಂಸ್ಥೆ ಆಯೋಜಿಸಿದ ಈ ಹೋರಾಟಕ್ಕೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ. ನಿತ್ಯ 20ರಿಂದ 25 ಕಿ.ಮೀ ಸಾಗುವ ಈ ಯಾತ್ರೆ ಹಿರಿಯೂರು, ಶಿರಾ, ತುಮಕೂರು ಮಾರ್ಗವಾಗಿ ಜ.30ರಂದು ಬೆಂಗಳೂರು ತಲುಪಲಿದೆ. ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಪಾದಯಾತ್ರೆಗೆ ಮಾರ್ಗ ಮಧ್ಯದ ಗ್ರಾಮಗಳಲ್ಲಿ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ರಾಯಚೂರು, ಬೀದರ್, ಕಲಬುರ್ಗಿಯಿಂದ ಬಂದಿರುವ ಮಹಿಳೆಯರು ಆಂದೋಲನದಲ್ಲಿ ಪಾಲ್ಗೊಂಡಿದ್ದಾರೆ. ಬಹುತೇಕ ಗ್ರಾಮೀಣ ಪ್ರದೇಶದ ರೈತ ಹಾಗೂ ಕೂಲಿ ಕಾರ್ಮಿಕ ಕುಟುಂಬದವರೇ ಹೆಚ್ಚಾಗಿದ್ದಾರೆ. ಇವರೊಂದಿಗೆ ಚಿಕ್ಕ ಮಕ್ಕಳೂ ಇದ್ದಾರೆ.

ADVERTISEMENT

ಶಿವಮೂರ್ತಿ ಮುರುಘ ಶರಣರು ಹಾಗೂ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಹಲವು ಮಠಾಧೀಶರು ಪಾದಯಾತ್ರೆಗೆ ಚಾಲನೆ ನೀಡಿದರು. ಕೂಡಲೇ ಮದ್ಯ ನಿಷೇಧಕ್ಕೆ ನಿರ್ಧಾರ ಕೈಗೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.