ಕಡೂರು: ಇಲ್ಲಿನ ವರಪ್ರದ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದ ರೋಹನ್ (17) ಎಂಬಾತನನ್ನು ಮಂಗಳವಾರ ಕೊಲೆ ಮಾಡಲಾಗಿದ್ದು, ಪ್ರೀತಿ ವಿಚಾರದಲ್ಲಿ ಹುಡುಗಿಯ ಸಂಬಂಧಿಕರೇ ಈ ಕೊಲೆ ಮಾಡಿರುವುದನ್ನು ಪೊಲೀಸರು ಬುಧವಾರ ಪತ್ತೆಹಚ್ಚಿದ್ದಾರೆ.
ಕೊಲೆ ಸಂಬಂಧ ಕಡೂರು ಪೊಲೀಸರು ಜೀವನ್, ಅಶ್ವಿನ್ ಮತ್ತು ಬಾಲಾಪರಾಧಿಯೊಬ್ಬನನ್ನು ಬಂಧಿಸಿದ್ದಾರೆ.
ರೋಹನ್ (17) ಬೀರೂರಿನ ರಾಜಾಜಿನಗರದ ಕಾತ್ಯಾಯಿನಿ ಎಂಬುವವರ ಒಬ್ಬನೇ ಮಗ. ರೋಹನ್ ತಂದೆ ಶಿಕ್ಷಕರಾಗಿದ್ದು, ಎರಡು ತಿಂಗಳ ಹಿಂದಷ್ಟೇ ಹೃದಯಾಘಾತದಿಂದ ನಿಧನರಾಗಿದ್ದರು. ರೋಹನ್ ಬೀರೂರಿನವಳೇ ಆದ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಹುಡುಗಿಯ ಸಂಬಂಧಿಕರೇ ಆದ ಅಶ್ವಿನ್ ಮತ್ತು ಜೀವನ್ ಇಬ್ಬರೂ ರೋಹನ್ ಮಂಗಳವಾರ ಕಾಲೇಜು ಮುಗಿಸಿಕೊಂಡು ಕಾಲೇಜಿನ ಬಸ್ನಲ್ಲಿ ಬೀರೂರಿಗೆ ಹೊರಡುವ ಮುಂಚೆ ಆತನನ್ನು ಕರೆದು ಅಲ್ಲಿಯೇ ನಿಲ್ಲಿಸಿಕೊಂಡಿದ್ದ ಮಾರುತಿ ಕಾರಿನಲ್ಲಿ ಕೂರಿಸಿಕೊಂಡು ಹೊರಟಿದ್ದರು. ಎಮ್ಮೆದೊಡ್ಡಿಯಿಂದ ಬೀರೂರಿಗೆ ಹೋಗುವ ರಸ್ತೆಯಲ್ಲಿ ರೋಹನ್ನ ಕುತ್ತಿಗೆಗೆ ವೇಲ್ ಬಿಗಿದು ಕೊಲೆ ಮಾಡಿ ಮೃತದೇಹವನ್ನು ಚೀಲದೊಳಗೆ ಹಾಕಿ ಲಿಂಗದಹಳ್ಳಿ ರಸ್ತೆಯ ಸಂತವೇರಿ ಬಳಿಯ ಸೇತುವೆ ಬಳಿ ಎಸೆದು ಹೋಗಿದ್ದರು.
ಆರೋಪಿಗಳು ಕಾತ್ಯಾಯಿನಿ ಅವರಿಗೆ ಕರೆ ಮಾಡಿ, ‘ನಿಮ್ಮ ಮಗ ರೋಹನ್ ನಮ್ಮ ವಶದಲ್ಲಿದ್ದಾನೆ. ₹15 ಲಕ್ಷ ಕೊಟ್ಟರೆ ಬಿಡುತ್ತೇವೆ. ಕೂಡಲೇ ಕಡೂರು-ಬೀರೂರು ಮಧ್ಯೆ ಇರುವ ಡೇರಿ ಬಳಿಗೆ ಹಣ ತನ್ನಿ’ ಎಂದು ಹೇಳಿದ್ದರು. ಈ ಕರೆಯನ್ನು ಆಧರಿಸಿ ತನಿಖೆ ನಡೆಸಿದಾಗ ಪೊಲೀಸರಿಗೆ ಆರೋಪಿಗಳ ಸುಳಿವು ಸಿಕ್ಕಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.