ನಂಜನಗೂಡು: ತಾಲ್ಲೂಕಿನ ದುಗ್ಗಹಳ್ಳಿ ಗ್ರಾಮದಲ್ಲಿ ಪ್ರೇಮಿಗಳಿಬ್ಬರು ಚಾಕುವಿನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ದುಗ್ಗಹಳ್ಳಿ ಗ್ರಾಮದ ಕಾವ್ಯಾ (18), ಕುರಿಹುಂಡಿ ಗ್ರಾಮದ ಅಭಿ (18) ಆತ್ಮಹತ್ಯೆಗೆ ಯತ್ನಿಸಿದವರು.
ಕಾವ್ಯಾ ಪ್ರಾಣಾಪಾಯದಿಂದ ಪಾರಾಗಿದ್ದು ಅಭಿ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹುಲ್ಲಹಳ್ಳಿ ಸರ್ಕಾರಿ ಪಿ.ಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಕಾವ್ಯಾ ಮತ್ತು ಅಭಿ 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅನ್ಯ ಜಾತಿಗೆ ಸೇರಿದ ಕಾರಣ ಎರಡೂ ಕುಟುಂಬದವರು ವಿರೋಧಿಸಿದ್ದರು ಎನ್ನಲಾಗಿದೆ. ಗುರುವಾರ ಬೆಳಿಗ್ಗೆ ಕಾವ್ಯ ಪೋಷಕರು ಜಮೀನಿಗೆ ತೆರಳಿದ್ದಾಗ ಅವರ ಮನೆಗೆ ಅಭಿ ಬಂದಿದ್ದು, ಇಬ್ಬರೂ ಒಟ್ಟಿಗೆ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದಾರೆ. ಅರ್ಧ ಭಾಗ ಕೊಯ್ದುಕೊಂಡು ನೋವು ಸಹಿಸಿಕೊಳ್ಳಲಾಗದೇ ಮನೆಯ ಹೊರಗಡೆ ಬಂದು ಕಿರುಚಾಡಿದ್ದಾರೆ. ಅದನ್ನು ಕಂಡ ಗ್ರಾಮಸ್ಥರು ಹುಲ್ಲಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪಿಎಸ್ಐ ಸುರೇಂದ್ರ ಹಾಗೂ ಸಿಬ್ಬಂದಿ ಇಬ್ಬರನ್ನೂ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಕುರಿತು ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.