ADVERTISEMENT

ವಂಚನೆ ಪ್ರಕರಣ; ನೌಹೇರಾ ಶೇಖ್‌ ನ್ಯಾಯಾಲಯಕ್ಕೆ ಹಾಜರು

​ಪ್ರಜಾವಾಣಿ ವಾರ್ತೆ
Published 11 ಜುಲೈ 2019, 11:19 IST
Last Updated 11 ಜುಲೈ 2019, 11:19 IST
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೌಹೇರಾ ಶೇಖ್‌ ಅವರನ್ನು ಗುರುವಾರ ಹೊಸಪೇಟೆಯ ಪ್ರಧಾನ ಸಿವಿಲ್‌ ನ್ಯಾಯಾಲಯಕ್ಕೆ ಬಿಗಿ ಭದ್ರತೆಯಲ್ಲಿ ಹಾಜರುಪಡಿಸಲಾಯಿತು
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೌಹೇರಾ ಶೇಖ್‌ ಅವರನ್ನು ಗುರುವಾರ ಹೊಸಪೇಟೆಯ ಪ್ರಧಾನ ಸಿವಿಲ್‌ ನ್ಯಾಯಾಲಯಕ್ಕೆ ಬಿಗಿ ಭದ್ರತೆಯಲ್ಲಿ ಹಾಜರುಪಡಿಸಲಾಯಿತು   

ಹೊಸಪೇಟೆ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೀರಾ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ನೌಹೇರಾ ಶೇಖ್‌ ಅವರನ್ನು ಗುರುವಾರ ನಗರದ ಪ್ರಧಾನ ಸಿವಿಲ್‌ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ನಗರದ ಕಂಚಗಾರಪೇಟೆಯ ಬಳ್ಳಾರಿ ಬಾಷಾ ಹಾಗೂ ಅವರ ಸಂಬಂಧಿಕರು ಹೀರಾ ಸಮೂಹ ಸಂಸ್ಥೆಯಲ್ಲಿ ₹45 ಲಕ್ಷ ಹೂಡಿಕೆ ಮಾಡಿದ್ದರು. ಈ ಕುರಿತು ಬಾಷಾ ಅವರು 2018ರ ನವೆಂಬರ್‌ 25ರಂದು ಇಲ್ಲಿನ ಪಟ್ಟಣ ಠಾಣೆಯಲ್ಲಿ ನೌಹೇರಾ ಶೇಖ್‌ ವಿರುದ್ಧ ದೂರು ಕೊಟ್ಟಿದ್ದರು. ದೂರು ಆಧರಿಸಿ ಪೊಲೀಸರು ಐ.ಪಿ.ಸಿ. ಕಲಂ 406, 420ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು.

ಒಟ್ಟು ₹5 ಸಾವಿರ ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹೈದರಾಬಾದ್‌ ಪೊಲೀಸರು ನೌಹೇರಾ ಶೇಖ್‌ ಅವರನ್ನು ಬಂಧಿಸಿದ್ದಾರೆ. ಪ್ರಕರಣದ ವಿಚಾರಣೆ ಸಂಬಂಧ ಪಟ್ಟಣ ಠಾಣೆ ಸಿಪಿಐ ಪ್ರಸಾದ್‌ ಗೋಖಲೆ ನೇತೃತ್ವದ ವಿಶೇಷ ಪೊಲೀಸ್‌ ತಂಡ ಶೇಖ್‌ ಅವರನ್ನು ಚಂಚಲಗುಡ ಕಾರಾಗೃಹದಿಂದ ಬಿಗಿ ಪೊಲೀಸ್‌ ಬಂದೋಬಸ್ತ್‌ನಲ್ಲಿ ನ್ಯಾಯಾಲಯಕ್ಕೆ ಕರೆತಂದಿತ್ತು. ಶೇಖ್‌ ಅವರನ್ನು ಕರೆತಂದ ವಿಷಯ ತಿಳಿದು ನ್ಯಾಯಾಲಯದ ಆವರಣದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು.

ADVERTISEMENT

ಪ್ರಧಾನ ಸಿವಿಲ್‌ ನ್ಯಾಯಾಧೀಶೆ ಪೂರ್ಣಿಮಾ ಯಾದವ್‌ ಪ್ರಕರಣದ ವಿಚಾರಣೆ ನಡೆಸಿದರು. ಶೇಖ್‌ ಪರವಾಗಿ ವಕೀಲ ಮೊಹಮ್ಮದ್‌ ಗೌಸ್‌, ಸರ್ಕಾರಿ ಅಭಿಯೋಜಕರಾಗಿ ಗೀತಾ ಮಿರಜಕರ್‌ ನ್ಯಾಯಾಲಯದಲ್ಲಿ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.