ಮಂಗಳೂರು: ಅಮೆರಿಕದಿಂದ ಬಂದು 30 ವರ್ಷ ತುಳು ಭಾಷೆ ಹಾಗೂ ಸಂಸ್ಕೃತಿಯ ಬಗ್ಗೆ ಸಂಶೋಧನೆ ನಡೆಸಿದ್ದ ಡಾ. ಪೀಟರ್ ಜೆ.ಕ್ಲಾಸ್ (87) ಭಾನುವಾರ ಅಮೆರಿಕದಲ್ಲಿ ನಿಧನರಾದರು.
ಕ್ಯಾಲಿಫೋರ್ನಿಯಾ ಸ್ಟೇಟ್ ವಿಶ್ವವಿದ್ಯಾಲಯದ ಮಾನವ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿದ್ದ ಡಾ.ಕ್ಲಾಸ್ ಅವರು ತುಳು ಸಂಸ್ಕೃತಿಯ ಅಧಿಕೃತ ವಕ್ತಾರರಂತಿದ್ದರು. ಅಮೆರಿಕದಿಂದ 1967ರಲ್ಲಿ ಕರಾವಳಿಗೆ ಬರುವ ಮುನ್ನ ಅವರು ಪ್ರೊ. ಎಂ.ಬಿ.ಕೃಷ್ಣಮೂರ್ತಿ ಮತ್ತು ಡಾ.ಎ.ಕೆ.ರಾಮನುಜನ್ ಅವರ ಸಂಪರ್ಕದಿಂದ ಕನ್ನಡ ಕಲಿತಿದ್ದರು.
ತುಳು ಭಾಷೆ ಜತೆಗೆ ಸಂಸ್ಕೃತಿಯನ್ನೂ ಕಲಿತು ತುಳುವರಾದರು. ಆದ್ದರಿಂದಲೇ 2004ರಲ್ಲಿ ತುಳು ಸಾಹಿತ್ಯ ಅಕಾಡೆಮಿಯು ಅವರಿಗೆ ಗೌರವ ಪ್ರಶಸ್ತಿ ಪ್ರದಾನ ಮಾಡಿತ್ತು.ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಕ್ಷೇತ್ರಾಧ್ಯಯನ ನಡೆಸಿ ‘ಬಂಟ ನಾಡವ ಜಾತಿ ಸಂಕೀರ್ಣದ ಬಂಧುತ್ವ ವ್ಯವಸ್ಥೆ’ ಎಂಬ ವಿಷಯದ ಬಗ್ಗೆ ಮಹಾಪ್ರಬಂಧ ಮಂಡಿಸಿ 1970ರಲ್ಲಿ ಅಮೆರಿಕದ ಡ್ಯೂಕ್ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪಡೆದಿದ್ದರು.
ಪಾಡ್ದನ, ಸಿರಿಜಾತ್ರೆ, ಪೆಂರ್ದೆರ್ ಮೊದಲಾದ ವಿಷಯಗಳ ಬಗ್ಗೆ ಅವರು ಬರೆದ ಲೇಖನಗಳು ಮಹತ್ವದವು. ಪ್ರೊ. ಎ.ವಿ.ನಾವಡ ಮತ್ತು ಸುಭಾಶ್ಚಂದ್ರ ಅವರು ಪೀಟರ್ ಅವರ ಎಂಟು ಸಂಶೋಧನಾ ಲೇಖನಗಳನ್ನು ಕನ್ನಡಕ್ಕೆ ಅನುವಾದಿಸಿ ‘ತುಳುವ ದರ್ಶನ’ ಎಂಬ ಕೃತಿ ಪ್ರಕಟಿಸಿದ್ದಾರೆ. ಇನ್ನೊಂದು ಸಂಪುಟ ಮುಂದಿನ ತಿಂಗಳು ಬಿಡುಗಡೆಗೆ ಸಿದ್ಧವಾಗಿದೆ. ವಿಶ್ವವಿದ್ಯಾಲಯದ ಅತಿಥಿಗೃಹಗಳಲ್ಲಿ ವಾಸ್ತವ್ಯಕ್ಕೆ ನಿರಾಕರಿಸಿ ಗುಡಿಸಲಿನಲ್ಲಿ ವಾಸಿಸುತ್ತ ಸಂಶೋಧನೆಯನ್ನು ನಡೆಸಿದ ಸರಳಜೀವಿಯಾಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.