ಬೆಂಗಳೂರು:ಪಿಯು ಉಪನ್ಯಾಸಕರ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸಿದ ಪರೀಕ್ಷೆಗಳ ಕೀ ಉತ್ತರದಲ್ಲಿ ತಪ್ಪುಗಳು ಇರುವ ಕುರಿತು ನಿವೃತ್ತ ಐಎಎಸ್ ಅಧಿಕಾರಿ ಬಿ.ಎ.ಹರೀಶ್ ಗೌಡ ಅವರು ಪರಿಶೀಲಿಸಿ ಸಲ್ಲಿಸಿರುವ ತನಿಖಾ ವರದಿಯನ್ನು ಬಹಿರಂಗಪಡಿಸಬೇಕು ಎಂದು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪನ್ಯಾಸಕ ಹುದ್ದೆಯ ಅಭ್ಯರ್ಥಿ ಪಿ.ಅರ್ಜುನ್, ‘2014–15ನೇ ಸಾಲಿನಲ್ಲಿ ನಡೆದ ಪದವಿ ಪೂರ್ವ ಉಪನ್ಯಾಸಕರ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿ ಮೂರು ಬಾರಿ ಕೀ ಉತ್ತರಗಳನ್ನು ಪ್ರಕಟಿಸಿದ ಮೇಲೂ ತಪ್ಪುಗಳು ಉಳಿದಿದ್ದವು.ಈ ಬಗ್ಗೆ ಸ್ವತಃ ಸಾಹಿತಿಗಳು, ಶಿಕ್ಷಣ ತಜ್ಞರೇಆಕ್ಷೇಪ ವ್ಯಕ್ತಪಡಿಸಿದ್ದಾರೆ, ಅದಕ್ಕಾಗಿಯೇ ಹರೀಶ್ ಗೌಡರಿಂದ ತನಿಖೆ ನಡೆಸಲಾಗಿದೆ. ಆದರೆ ತನಿಖೆಯಲ್ಲಿ ಕಂಡ ಅಂಶಗಳು ಏನು, ಅದನ್ನು ಅನುಷ್ಠಾನಕ್ಕೆ ತರಲಾಗಿದೆಯೇ ಎಂಬುದನ್ನು ಸಾರ್ವಜನಿಕರಿಗೆ ತಿಳಿಸದೆ ಮರೆ ಮಾಚಲಾಗಿದೆ’ ಎಂದರು.
‘ಹರೀಶ್ ಗೌಡ ಅವರು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆಸಲ್ಲಿಸಿರುವ ಸಮಗ್ರ ವರದಿಯ ಆಧಾರದಲ್ಲಿ ವಿಧಾನ ಪರಿಷತ್ ಸದಸ್ಯರಿಗೆ ಸಲ್ಲಿಸಿರುವ ಉತ್ತರದಲ್ಲಿ ಕೆಲವಷ್ಟು ಮಾಹಿತಿಗಳು ಬಹಿರಂಗವಾಗಿವೆ. ಅದರಲ್ಲಿ ಕನ್ನಡ ಸಹಿತ ಕೆಲವು ವಿಷಯಗಳಲ್ಲಿ ಕೆಲವು ಪ್ರಶ್ನೆಗಳಿಗೆ ಸರಿ ಉತ್ತರ ನೀಡಿ, ತಪ್ಪನ್ನು ತಿದ್ದಿಕೊಂಡು ಹೊಸದಾಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಲು ತಿಳಿಸಲಾಗಿದೆ. ಆದರೆ ತನಿಖಾ ವರದಿಯಂತೆ ಸರ್ಕಾರ ನಡೆದುಕೊಂಡೇ ಇಲ್ಲ. ತನಿಖಾ ವರದಿಯ ಶಿಫಾರಸುಗಳನ್ನು ಗಾಳಿಗೆ ತೂರಿ, ಈ ಹಿಂದೆ ಪ್ರಕಟಿಸಿದ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನೇ ಅಂತಿಮ ಆಯ್ಕೆ ಪಟ್ಟಿ ಎಂದು ಬಿಂಬಿಸಿ ಪ್ರಕಟಿಸಲಾಗಿದೆ. ಇದರಿಂದ ಹಲವಾರು ಅಭ್ಯರ್ಥಿಗಳಿಗೆಅನ್ಯಾಯ ಆಗಿದೆ’ ಎಂದು ಅವರು ದೂರಿದರು.
‘ಈಗ ಪ್ರಕಟಗೊಂಡಿರುವಅಂತಿಮ ಆಯ್ಕೆ ಪಟ್ಟಿ ರದ್ಧುಗೊಳಿಸಬೇಕು. ತನಿಖಾ ವರದಿಯಲ್ಲಿರುವ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು. ಐದು ವರ್ಷಗಳಿಂದ ಖಾಲಿ ಇರುವ ಹುದ್ದೆಗಳನ್ನು ಇದೇ ನೇಮಕಾತಿಗೆ ಸೇರ್ಪಡೆ ಮಾಡಿ, ಅಂತಿಮ ಆಯ್ಕೆ ಪಟ್ಟಿ ಪ್ರಕಟಿಗೊಳಿಸಬೇಕು’ ಎಂದು ಒತ್ತಾಯಿಸಿದರು.
ಈ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ರಾಜ್ಯದಾದ್ಯಂತ ಪ್ರಗತಿಪರ ಸಂಘಟನೆಗಳ ಸಹಕಾರದೊಂದಿಗೆ ಹೋರಾಟ ನಡೆಸುವ ಎಚ್ಚರಿಕೆಯನ್ನು ಅವರು ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.