ಹಾವೇರಿ: ನಗರ ಹಾಗೂ ಸುತ್ತಲ ಪ್ರದೇಶದಲ್ಲಿ ಸೋಮವಾರ ಸಂಜೆ ಧಾರಾಕಾರ ಮಳೆ ಸುರಿದಿದ್ದು, ಸಿಡಿಲಿಗೆ ಇಬ್ಬರು ಬಲಿಯಾಗಿದ್ದಾರೆ. ಬಾಲಕನೊಬ್ಬ ಅಸ್ವಸ್ಥಗೊಂಡಿದ್ದಾನೆ.
ಸವಣೂರ ತಾಲ್ಲೂಕಿನ ಕುಣಿಮೆಳ್ಳಿಹಳ್ಳಿ ಗ್ರಾಮದ ನಾಗರಾಜ ಸಣ್ಣಭರಮಣ್ಣನವರ (21) ಹಾಗೂ ಹಾನಗಲ್ ತಾಲ್ಲೂಕಿನ ನರೇಗಲ್ ಗ್ರಾಮದ ಕುಮಾರಪ್ಪ ಶಿವಬಸಪ್ಪ ಕೋತಿನ (50) ಮೃತಪಟ್ಟಿದ್ದಾರೆ. ಇಬ್ಬರೂ ಹೊಲದಿಂದ ಮನೆಗೆ ಬರುತ್ತಿದ್ದ ವೇಳೆ ಸಿಡಿಲು ಬಡಿದಿದೆ. ತಾಲ್ಲೂಕಿನ ಕುರುಬಗೊಂಡ ಗ್ರಾಮದ 14 ವರ್ಷದ ಬಾಲಕ ಜಾಫರ್ ಸಾಬದದ್ದುಸಾಬ ಮಸೂತಿ ಸಿಡಿಲು ಬಡಿದು ಅಸ್ವಸ್ಥಗೊಂಡಿದ್ದು, ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಗರದಾದ್ಯಂತ ಧಾರಾಕಾರ ಮಳೆಯಾಗಿದ್ದು, ವಿವಿಧೆಡೆ ರಸ್ತೆಯಲ್ಲಿ ನೀರು ತುಂಬಿ ಸಂಚಾರ ವ್ಯತ್ಯಯಗೊಂಡಿತ್ತು. ಮಳೆಯ ಜೊತೆ ಬೀಸಿದ ಗಾಳಿಗೆ ಮರಗಳ ರೆಂಬೆಕೊಂಬೆಗಳು ಮುರಿದು ಬಿದ್ದಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಜಿಲ್ಲೆಯ ರಾಣೆಬೆನ್ನೂರು, ಬ್ಯಾಡಗಿ, ಹಾನಗಲ್ ಹಾಗೂ ಹಾವೇರಿಯಲ್ಲಿ ಗುಡುಗು–ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ.
ಇಬ್ಬರು ನೀರುಪಾಲು
ರಟ್ಟೀಹಳ್ಳಿ ತಾಲ್ಲೂಕಿನ ಪಾರ್ವತಿ ಸಿದ್ದಿಗೇರಿ ಗ್ರಾಮದ ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಗೀತಾ ಗುಡ್ಡಪ್ಪ ಕಣಜೀರ (40) ಮತ್ತು ಉಷಾ ಮಲ್ಲಪ್ಪ ಕೋಡಿಹಳ್ಳಿ (14) ನೀರು ಪಾಲಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.