ಚಿಕ್ಕೋಡಿ: ಇಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಮಾವೇಶದಿಂದ ಗೋಕಾಕದ ಶಾಸಕ ರಮೇಶ ಜಾರಕಿಹೊಳಿ ದೂರ ಉಳಿದದ್ದು ಹಲವು ಚರ್ಚೆಗಳಿಗೆ ಗ್ರಾಸವಾಗಿದೆ.
ತಮಗೆ ಸೂಕ್ತ ಸ್ಥಾನಮಾನ ದೊರೆತಿಲ್ಲ ಎಂದು ಮುನಿಸಿಕೊಂಡಿರುವ ಅವರು ಪ್ರಚಾರದಿಂದ ದೂರ ಉಳಿದಿದ್ದಾರೆ. ಎಐಸಿಸಿ ಅಧ್ಯಕ್ಷರು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪಾಲ್ಗೊಂಡಿದ್ದ ಸಮಾವೇಶದಿಂದಲೂ ದೂರ ಉಳಿದರು. ಈ ಮೂಲಕ ಜಿಲ್ಲಾ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಬಹಿರಂಗಗೊಂಡಿತು. ವಿಶೇಷವೆಂದರೆ, ಸಮಾವೇಶದಲ್ಲಿ ಮಾತನಾಡಿದ ಒಬ್ಬ ನಾಯಕರೂ ಅವರ ಹೆಸರನ್ನು ಕೂಡ ಪ್ರಸ್ತಾಪಿಸಲಿಲ್ಲ!
ಆದರೆ, ಅವರ ಬೆಂಬಲಿಗ ಶಾಸಕರಾದ ಮಹೇಶ ಕುಮಠಳ್ಳಿ ಹಾಗೂ ಶ್ರೀಮಂತ ಪಾಟೀಲ ಪಾಲ್ಗೊಂಡಿದ್ದು ಗಮನಸೆಳೆಯಿತು.
ಸತೀಶಗೆ ಜೈಕಾರ ಹಾಕಿಸಿದ ಲಕ್ಷ್ಮಿ!
ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಾತನಾಡುವ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೋಳಿ ವೇದಿಕೆಗೆ ಬಂದರು. ಆಗ, ನೆರೆದಿದ್ದ ಜನರು ಜೋರಾಗಿ ಕೂಗಿದರು; ಸಿಳ್ಳೆ ಹಾಕಿದರು. ಇದನ್ನು ಗಮನಿಸಿದ ಲಕ್ಷ್ಮಿ ‘ಸತೀಶಣ್ಣ ಜಾರಕಿಹೊಳಿ ಅವರಿಗೆ ಜೈಕಾರ’ ಹಾಕಿಸಿದ್ದು ವಿಶೇಷವಾಗಿತ್ತು. ಇರಲಿ ನೀವು ಮಾತನಾಡಿ ಎಂದು ಸತೀಶ ಹೇಳಿದಾಗ, ‘ಏನೋ ಜನ ಜೋಷ್ನಲ್ಲಿದ್ದಾರೆ ತಡೆಯಿರಿ’ ಎಂದು ಮತ್ತೊಮ್ಮೆ ಜೈಕಾರ ಹಾಕಿಸಿದರು.
ಸಂಸದ ಪ್ರಕಾಶ ಹುಕ್ಕೇರಿ ಅವರನ್ನು ಗಾಣದೆತ್ತು ಎಂದು ಬಣ್ಣಿಸಿದ ಲಕ್ಷ್ಮಿ, ‘ಅವರು ಕೆಲಸವನ್ನಷ್ಟೇ ಮಾಡುತ್ತಾರೆ; ಯಾವುದೇ ಒಣ ರಾಜಕೀಯ ಮಾಡುವುದಿಲ್ಲ. ಮಾದರಿ ಸಂಸದರಾಗಿದ್ದಾರೆ. ಈ ಹಿರಿಯ ಜೀವವನ್ನು ಸೋಲಿಸುವ ಮೂಲಕ ಅವರಿಗೆ ನೋವು ನೀಡಬಾರದು’ ಎಂದು ಜನರನ್ನು ಕೋರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.