ADVERTISEMENT

ಬೆಳಗಾವಿ | ಮತಾಂತರ ಶಂಕೆ: ಪಾದ್ರಿ, ಆದಿವಾಸಿಗಳ ಮೇಲೆ ಹಿಂದುತ್ವ ಸಂಘಟನೆಯ ದಾಳಿ

ಆರೋಪ ಅಲ್ಲಗೆಳೆದ ಕ್ರೈಸ್ತ ಧರ್ಮಗುರುಗಳು, ಪೊಲೀಸ್‌ ಭದ್ರತೆಯಲ್ಲಿ ಕೊಲ್ಹಾಪುರಕ್ಕೆ ಮರಳಿದ ಆದಿವಾಸಿಗಳು

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 9:31 IST
Last Updated 18 ಜನವರಿ 2023, 9:31 IST
ಬೆಳಗಾವಿಯಿಂದ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಮಂಗಳವಾರ ಆದಿವಾಸಿಗಳು ಕೊಲ್ಹಾಪುರಕ್ಕೆ ಪ್ರಯಾಣ ಬೆಳೆಸಿದರು / ಪ್ರಜಾವಾಣಿ ಚಿತ್ರ: ಇಮಾಮ್‌ಹುಸೇನ್‌ ಗೂಡುನವರ
ಬೆಳಗಾವಿಯಿಂದ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ಮಂಗಳವಾರ ಆದಿವಾಸಿಗಳು ಕೊಲ್ಹಾಪುರಕ್ಕೆ ಪ್ರಯಾಣ ಬೆಳೆಸಿದರು / ಪ್ರಜಾವಾಣಿ ಚಿತ್ರ: ಇಮಾಮ್‌ಹುಸೇನ್‌ ಗೂಡುನವರ   

ಬೆಳಗಾವಿ: ಕ್ರೈಸ್ತ ಪಾದ್ರಿಯೊಂದಿಗೆ ಗೋವಾಗೆ ತೆರಳುತ್ತಿದ್ದ ಮಹಾರಾಷ್ಟ್ರದ 40 ಜನ ಆದಿವಾಸಿಗಳನ್ನು ಇಲ್ಲಿನ ಪೊಲೀಸರು, ಮರಳಿ ಕೊಲ್ಹಾ‍ಪುರಕ್ಕೆ ಕಳುಹಿಸಿದರು. ಇವರನ್ನು ಮತಾಂತರಕ್ಕೆ ಕರೆದೊಯ್ಯಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಗರದಲ್ಲಿ ಕೆಲಕಾಲ ತ್ವೇಷಮಯ ವಾತಾವರಣ ನಿರ್ಮಾಣವಾಗಿತ್ತು.

ಮಹಾರಾಷ್ಟ್ರದ ಈ ಬುಡಕಟ್ಟು ಜನರನ್ನು ಮತಾಂತರಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ಆರೋಪಿಸಿ, ಸಾಂಗ್ಲಿಯಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಸೋಮವಾರ ರಾತ್ರಿ ಪಾದ್ರಿ ಮೇಲೆ ಹಲ್ಲೆ ನಡೆಸಿದ್ದರು. ಅವರಿಂದ ತಪ್ಪಿಸಿಕೊಂಡ ಪಾದ್ರಿ ಹಾಗೂ ಬುಡಕಟ್ಟು ಜನರು ಬೆಳಗಾವಿ ಮಾರ್ಗವಾಗಿ ಗೋವಾಗೆ ಹೊರಟಿದ್ದರು. ಬೆಳಗಾವಿಯಲ್ಲೂ ಹಲ್ಲೆ ನಡೆಯುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಪೊಲೀಸರು ಮುಂಜಾಗ್ರತಾ ಕ್ರಮ ವಹಿಸಿ, ವಾಪಸ್‌ ಕಳುಹಿಸಿಕೊಟ್ಟರು.

ಇವರೆಲ್ಲರೂ ಮಹಾರಾಷ್ಟ್ರದ ಧುಲೆ ಜಿಲ್ಲೆಯ ಶಿರಪುರದವರು. ಶಿರಪುರದ ವಿಶ್ವ ಮಂಡಲ ಸೇವಾಶ್ರಮದ ಪಾದ್ರಿ ಕಾನ್ಸ್ಟಿ ನೇತೃತ್ವದಲ್ಲಿ ಸೋಮವಾರ ಗೋವಾಗೆ ಪ್ರಯಾಣ ಬೆಳೆಸಿದ್ದರು. ಮನ್ಮಾಡ್‌ ನಿಲ್ದಾಣದಲ್ಲಿ ರೈಲು ಹತ್ತಿದ ಅವರು ರಾತ್ರಿ ಸಾಂಗ್ಲಿಗೆ ಬಂದಿದ್ದರು. ಆಗ, ಹಿಂದೂ ಸಂಘಟನೆಯ ಕಾರ್ಯಕರ್ತರು ಈ ತಂಡದ ಮೇಲೆ ಹಲ್ಲೆ ನಡೆಸಿದ್ದರು.

ADVERTISEMENT

‘ಆದಿವಾಸಿಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಲು ಕರೆದೊಯ್ಯಲಾಗುತ್ತಿದೆ ಎಂಬ ಸಂಶಯದಿಂದ ಅವರು ದಾಳಿ ನಡೆಸಿದರು. ಕೆಲವು ಆದಿವಾಸಿಗಳು ಹಾಗೂ ಪಾದ್ರಿಗೆ ಸಣ್ಣಪುಟ್ಟ ಗಾಯಗಳಾಗಿವೆ’ ಎಂದು ತಂಡದಲ್ಲಿದ್ದವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಸಾಂಗ್ಲಿಯಲ್ಲಿ ನಡೆದ ಘಟನೆಯ ಬಗ್ಗೆ ಪಾದ್ರಿ ಕಾನ್ಸ್ಟಿ, ಅವರು ಬೆಳಗಾವಿಯ ಕ್ರೈಸ್ತ ಧರ್ಮಗುರುಗಳಿಗೆ ದೂರವಾಣಿ ಕರೆ ಮಾಡಿ ತಿಳಿಸಿದರು. ಅವರು ಇಲ್ಲಿನ ಕ್ಯಾಂಪ್‌ ಠಾಣೆ ಪೊಲೀಸರಿಗೆ ಮಾಹಿತಿ ನೀಡಿ ರಕ್ಷಣೆ ಕೋರಿದರು.

ಘಟನೆ ಬಳಿಕ ಪಾದ್ರಿ ಹಾಗೂ ಆದಿವಾಸಿಗಳು ಅದೇ ರೈಲಿನ ಮೂಲಕ ಮಂಗಳವಾರ ಬೆಳಿಗ್ಗೆ ಬೆಳಗಾವಿಗೆ ಬಂದು ತಲುಪಿದರು. ತ್ವೇಷಮಯ ವಾತಾವರಣ ಹಿನ್ನೆಲೆಯಲ್ಲಿ, ನಗರದ ಪೊಲೀಸರು ಎಲ್ಲ ಆದಿವಾಸಿಗಳನ್ನೂ ವಿಶೇಷ ಬಸ್‌ನಲ್ಲಿ ಮರಳಿ ಕೊಲ್ಹಾಪುರಕ್ಕೆ ಕಳುಹಿಸಿದರು.

ಘಟನೆ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಾದ್ರಿ ಕಾನ್ಸ್ಟಿ, ‘ನಮ್ಮದು ಸರ್ಕಾರೇತರ ಸಂಸ್ಥೆಯಾಗಿದ್ದು, ಶಾಲೆ ನಡೆಸುತ್ತಿದ್ದೇವೆ. ಇಲ್ಲಿ ಬುಡಕಟ್ಟು ಜನಾಂಗದವರು ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ನಾಲ್ಕು ವರ್ಷಗಳಿಗೊಮ್ಮೆ ಬುಡಕಟ್ಟು ಜನಾಂಗದ ಶಿಕ್ಷಕರನ್ನು ಪ್ರವಾಸಕ್ಕೆ ಕರೆದೊಯ್ಯುತ್ತೇವೆ. ಈ ಬಾರಿಯೂ ಗೋವಾಕ್ಕೆ ಪ್ರವಾಸಕ್ಕೆಂದು ಹೊರಟಿದ್ದಾಗ, ಹಿಂದೂ ಕಾರ್ಯಕರ್ತರು ಎಂದು ಹೇಳಿಕೊಂಡ ಕೆಲವರು ದಾಳಿ ನಡೆಸಿದ್ದಾರೆ. ನಾವು ಯಾರನ್ನೂ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುತ್ತಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.