ಚಿಕ್ಕಬಳ್ಳಾಪುರ: ತಾಲ್ಲೂಕಿನ ಸ್ಕಂದಗಿರಿ ಬೆಟ್ಟದಲ್ಲಿ ಶುಕ್ರವಾರ ರಾತ್ರಿ ಚಾರಣಕ್ಕೆ ಹೋಗಿ ದಾರಿ ತಪ್ಪಿ ಬೆಟ್ಟದಲ್ಲಿ ಸಿಲುಕಿದ್ದ ಆರು ಜನರನ್ನು ಶನಿವಾರ ಮಧ್ಯಾಹ್ನ ಅರಣ್ಯ ಇಲಾಖೆ ಸಿಬ್ಬಂದಿ ಸುರಕ್ಷಿತವಾಗಿ ಕೆಳಗೆ ಕರೆತಂದರು.
ಹೊರ ರಾಜ್ಯಗಳ ನಿವಾಸಿಗಳು, ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ರಾಜೇಶ್ ಪಾಲೈ, ದರ್ಶಿತ್ ಬಡಿಯಾನಿ, ಬಿನಯ್ ರಾಯ್, ಶ್ವೇತಾಲಿನಾ ಮೋಹಾಂತಿ, ಸಾಸ್ವತಿ ಸೇತಿ, ಸಿರ್ಕಿ ಖಾತೂನ್ ಅವರು ಬೆಟ್ಟದಲ್ಲಿ ಸಿಲುಕಿದವರು. ಈ ಪೈಕಿ ಸಾಸ್ವತಿ, ಸಿರ್ಕಿ ಹೊರತುಪಡಿಸಿದಂತೆ ಉಳಿದವರೆಲ್ಲರೂ ಟೆಕ್ಕಿಗಳು.
ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಅಕ್ರಮವಾಗಿ ಚಾರಣಕ್ಕೆ ಹೋಗಿದ್ದ ಈ ತಂಡ, ದಾರಿ ತಪ್ಪಿ ಬೆಟ್ಟವನ್ನು ವಿರುದ್ಧ ದಿಕ್ಕಿನಲ್ಲಿ ಏರಿ ಕೆಳಗೆ ಇಳಿಯಾಗದೆ ರಕ್ಷಣೆಗೆ ಮೊರೆ ಇಟ್ಟಿತ್ತು. ಬೆಳಿಗ್ಗೆ 11.30ರ ಸುಮಾರಿಗೆ ನಗರದ ವನ್ಯಜೀವಿ ಸಂರಕ್ಷಕ ಸ್ನೇಕ್ ಪೃಥ್ವಿ ಅವರಿಗೆ ಕರೆದ ಈ ಚಾರಣಿಗರು ಬೆಟ್ಟದಲ್ಲಿ ಸಿಲುಕಿ ಹಾಕಿಕೊಂಡಿರುವ ವಿಷಯ ತಿಳಿಸಿ, ರಕ್ಷಣೆಗೆ ಮನವಿ ಮಾಡಿಕೊಂಡಿದ್ದರು.
ಈ ಬಗ್ಗೆ ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಪೃಥ್ವಿ ಅವರು ಬೆಟ್ಟಕ್ಕೆ ತೆರಳಿ ಅರಣ್ಯ ಇಲಾಖೆ ಸಿಬ್ಬಂದಿ ಶ್ರೀಕಲಾ, ರಾಜು ಅವರ ನೆರವಿನೊಂದಿಗೆ ಚಾರಣಿಗರು ಸಿಲುಕಿಕೊಂಡಿದ್ದ ಜಾಗ ಪತ್ತೆ ಮಾಡಿ ಬೆಟ್ಟದ ಕೆಳಗೆ ಕರೆದುಕೊಂಡು ಬಂದರು.
ಈ ಆರು ಜನರನ್ನು ನಗರದ ವಲಯ ಅರಣ್ಯಾಧಿಕಾರಿ ಕಚೇರಿಗೆ ಕರೆದುಕೊಂಡು ಬಂದ ಅರಣ್ಯ ಇಲಾಖೆ ಸಿಬ್ಬಂದಿ, ಅಕ್ರಮವಾಗಿ ಬೆಟ್ಟ ಪ್ರವೇಶಿಸಿದ ಕಾರಣಕ್ಕೆ ಪ್ರತಿಯೊಬ್ಬರಿಂದ ಬಾಂಡ್ನಲ್ಲಿ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು, ₨3000 ದಂಡ ವಿಧಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.