ADVERTISEMENT

ಸಂಪುಟ ಸಭೆಗೆ ಸತತ ಗೈರು: ಸಚಿವ ಜಾರಕಿಹೊಳಿ ವಜಾಕ್ಕೆ ಗಡಾದ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 14:19 IST
Last Updated 16 ಅಕ್ಟೋಬರ್ 2018, 14:19 IST

ಬೆಳಗಾವಿ: ‘ಆರೋಗ್ಯವಾಗಿದ್ದರೂ ಉದ್ದೇಶಪೂರ್ವಕವಾಗಿ ಸಂಪುಟ ಸಭೆಗೆ ಗೈರು ಹಾಜರಾಗುತ್ತಿರುವ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರನ್ನು ವಜಾಗೊಳಿಸಬೇಕು’ ಎಂದು ಜೆಡಿಎಸ್‌ ಮುಖಂಡ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಮುಖ್ಯಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

‘ದೇವರಲ್ಲಿ ಹರಕೆ ಕಟ್ಟಿದ್ದೇನೆ; ಅದು ಈಡೇರುವರೆಗೂ ಸಚಿವ ಸಂಪುಟ ಸಭೆಗೆ ಹಾಜರಾಗುವುದಿಲ್ಲ. ಈವರೆಗೆ 5 ಸಭೆಗಳಲ್ಲಿ ಭಾಗವಹಿಸಿಲ್ಲ ಎಂದು ಸ್ವತಃ ಸಚಿವರೇ ಈಚೆಗೆ ಹೇಳಿಕೆ ನೀಡಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದಲ್ಲಿ ಅಥವಾ ವಿದೇಶ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಮಾತ್ರವೇ ಸಂಪುಟ ಸಭೆಗೆ ಗೈರುಹಾಜರಾದ ಉದಾಹರಣೆಗಳಿವೆ. ಆದರೆ, ಪ್ರಮುಖ ಖಾತೆ ಹೊಂದಿರುವ ಸಚಿವರು ದೇವರು, ಹರಕೆ ಎಂದು ಕಾರಣ ಹೇಳುತ್ತಿರುವುದು ಇದೇ ಮೊದಲು. ಈ ಮೂಲಕ ಅವರು ಸಂವಿಧಾನಕ್ಕೆ ಅಪಚಾರ ಎಸಗಿದ್ದಾರೆ’ ಎಂದು ಟೀಕಿಸಿದ್ದಾರೆ.

‘ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ, ನಡವಳಿಕೆ ಹಾಗೂ ನಿಯಮಾವಳಿಗಳ ಪ್ರಕಾರ, ಎರಡು ಹಾಗೂ ಅದಕ್ಕಿಂತ ಹೆಚ್ಚಿನ ಸಭೆಗಳಿಗೆ ಗೈರು ಹಾಜರಾದಲ್ಲಿ ಸದಸ್ಯತ್ವದಿಂದ ತೆಗೆಯಲು ಅವಕಾಶವಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

‘ಈ ಮನವಿಯನ್ನು ಪರಿಶೀಲಿಸಿ ಮುಂದಿನ ಕ್ರಮ ವಹಿಸುವಂತೆ ಕೋರಲು ನಿರ್ದೇಶಿತನಾಗಿದ್ದೇನೆ’ ಎಂದು ಮುಖ್ಯಕಾರ್ಯದರ್ಶಿಯ ಆಪ್ತ ಕಾರ್ಯದರ್ಶಿ ತುಕಾರಾಮ ಕಲ್ಯಾಣಕರ ಅ.10ರಂದು ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆಯ ಕಾರ್ಯದರ್ಶಿಗೆ ರವಾನಿಸಿದ್ದಾರೆ. ಈ ಕುರಿತು ತಮಗೆ ಲಿಖಿತ ಮಾಹಿತಿ ಬಂದಿದೆ ಎಂದು ಭೀಮಪ್ಪ ಗಡಾದ ಪ್ರಕಟಣೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.