ADVERTISEMENT

ಸಾಗರಮಾಲಾ ಯೋಜನೆಗೆ ವಿರೋಧ: 16ಕ್ಕೆ ಕಾರವಾರ ಬಂದ್‌

ಶಾಸಕಿ, ಸಂಸದರ ಭಾವಚಿತ್ರಗಳಿಗೆ ಸೆಗಣಿ ಎರಚಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 1:47 IST
Last Updated 15 ಜನವರಿ 2020, 1:47 IST
‘ಸಾಗರಮಾಲಾ’ ಯೋಜನೆಯಡಿ ಕಾರವಾರದ ವಾಣಿಜ್ಯ ಬಂದರಿನ ವಿಸ್ತರಣೆಯನ್ನು ವಿರೋಧಿಸಿ ಮೀನುಗಾರರು ಮಂಗಳವಾರವೂ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಸಂಸದ ಅನಂತಕುಮಾರ ಹೆಗಡೆ ಮತ್ತು ಶಾಸಕಿ ರೂಪಾಲಿ ನಾಯ್ಕ ಅವರ ಭಾವಚಿತ್ರಗಳಿಗೆ ಮಹಿಳೆಯರು ಸಗಣಿ ಮೆತ್ತಿ, ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು
‘ಸಾಗರಮಾಲಾ’ ಯೋಜನೆಯಡಿ ಕಾರವಾರದ ವಾಣಿಜ್ಯ ಬಂದರಿನ ವಿಸ್ತರಣೆಯನ್ನು ವಿರೋಧಿಸಿ ಮೀನುಗಾರರು ಮಂಗಳವಾರವೂ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಸಂಸದ ಅನಂತಕುಮಾರ ಹೆಗಡೆ ಮತ್ತು ಶಾಸಕಿ ರೂಪಾಲಿ ನಾಯ್ಕ ಅವರ ಭಾವಚಿತ್ರಗಳಿಗೆ ಮಹಿಳೆಯರು ಸಗಣಿ ಮೆತ್ತಿ, ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿದರು   

ಕಾರವಾರ: ‘ಸಾಗರಮಾಲಾ’ ಯೋಜನೆಯಡಿ ನಗರದ ವಾಣಿಜ್ಯ ಬಂದರಿನ ವಿಸ್ತರಣೆ ಕಾಮಗಾರಿಯನ್ನು ವಿರೋಧಿಸಿ ಸ್ಥಳೀಯ ಮೀನುಗಾರರು ಮಂಗಳವಾರವೂ ಧರಣಿ, ಪ್ರತಿಭಟನೆ ಮುಂದುವರಿಸಿದರು. ಅಲ್ಲದೇ ಜ.16ರಂದು ಕಾರವಾರ ಬಂದ್‌ಗೆ ಕರೆ ನೀಡಿ, ಭಟ್ಕಳದಿಂದ ಕಾರವಾರದವರೆಗೆ ಮೀನುಗಾರಿಕೆ ಸ್ಥಗಿತಗೊಳಿಸಲು ನಿರ್ಧರಿಸಿದರು.

ಮೀನು ಮಾರುಕಟ್ಟೆಯಲ್ಲಿ ಕೆಲಸ ಸ್ಥಗಿತಗೊಳಿಸಿದ ನೂರಾರು ಮೀನುಗಾರ ಮಹಿಳೆಯರು, ಯೋಜನಾ ಪ್ರದೇಶದ ಸಮೀಪ ಬೆಳಿಗ್ಗೆಯೇ ಸೇರಿದರು. ಸಂಸದ ಅನಂತಕುಮಾರ ಹೆಗಡೆ ಮತ್ತು ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ ವಿರುದ್ಧ ಘೋಷಣೆ ಕೂಗಿ, ಅವರ ಭಾವಚಿತ್ರಗಳಿಗೆ ಸಗಣಿ ಮೆತ್ತಿ, ಚಪ್ಪಲಿಯಿಂದ ಹೊಡೆದು ಆಕ್ರೋಶ ಹೊರಹಾಕಿದರು.

‘ಮೀನುಗಾರರ ಹಿತಾಸಕ್ತಿಗಳಿಗೆ ಧಕ್ಕೆಯಾಗುವಂಥ ಯಾವುದೇ ಯೋಜನೆಗಳನ್ನು ಜಾರಿ ಮಾಡುವುದಿಲ್ಲ ಎಂದು ಇಬ್ಬರೂ ಭರವಸೆ ನೀಡಿದ್ದರು. ಆದರೆ, ಈಗ ಬಂದರು ವಿಸ್ತರಣೆಗೆ ಅಲೆ ತಡೆಗೋಡೆ ನಿರ್ಮಿಸಲಾಗುತ್ತಿದೆ. ಇಬ್ಬರನ್ನೂ ನಂಬಲಾಗದು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಘೋಷಣೆ ಕೂಗುತ್ತ ಜಿಲ್ಲಾಧಿಕಾರಿ ಕಚೇರಿಯ ಬಳಿ ಸೇರಿದರು. ಪುರುಷರ ಉಡುಗೆಯಲ್ಲಿ ಶಾಸಕಿ ರೂಪಾಲಿ ನಾಯ್ಕ ಹಾಗೂ ಸಂಸದ ಅನಂತಕುಮಾರ ಹೆಗಡೆ ಸೀರೆ ಉಟ್ಟಿರುವಂತೆ ಮಾರ್ಪಡಿಸಿದ ಭಾವಚಿತ್ರಗಳನ್ನಿರಿಸಿಕೊಂಡು ತಮ್ಮ ಧರಣಿ ಮುಂದುವರಿಸಿದರು. ರಾಷ್ಟ್ರೀಯ ಹೆದ್ದಾರಿ 66ರ ಸರ್ವಿಸ್ ರಸ್ತೆಯಲ್ಲಿ ಸುಮಾರು 2 ತಾಸು ಮೀನುಗಾರರು ಧರಣಿ ಕುಳಿತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.