ಬೆಂಗಳೂರು: ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಲು, ಕೊರೊನಾ ಚಿಕಿತ್ಸೆಗೆ ನೀಡುವುದಕ್ಕೆ ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಬೊಕ್ಕಸ ಖಾಲಿ ಆಗಿರುವುದಾದರೂ ಹೇಗೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸೋಮವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಈಗ ಸರ್ಕಾರ ₹ 90,000 ಕೋಟಿ ಸಾಲ ಮಾಡಲು ಹೊರಟಿದೆ. ಬೊಕ್ಕಸದಲ್ಲಿದ್ದ ದುಡ್ಡು ಎಲ್ಲಿಗೆ ಹೋಯಿತು? ಮುಖ್ಯಮಂತ್ರಿ ಮತ್ತು ಸಚಿವರ ಜೇಬಿಗೆ ಹೋಯಿತಾ’ ಎಂದು ಕೇಳಿದ್ದಾರೆ.
‘ಕಳೆದ ವರ್ಷ ಪ್ರವಾಹದಿಂದ 2.24 ಲಕ್ಷ ಮನೆಗಳಿಗೆ ಹಾನಿಯಾಗಿತ್ತು. 1.24 ಲಕ್ಷ ಮನೆಗಳಿಗೆ ಮಾತ್ರ ಪರಿಹಾರ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ವರದಿ ನೀಡಿದೆ. ಉಳಿದ ಮನೆಗಳಿಗೆ ಪರಿಹಾರ ಕೊಡಲು ಹೇಗೆ ಸಾಧ್ಯ? ಕಳೆದ ವರ್ಷ ಪ್ರವಾಹ ಪರಿಹಾರಕ್ಕೆ ₹ 35,000 ಕೋಟಿ ಕೇಳಲಾಗಿತ್ತು. ಕೇಂದ್ರ ಸರ್ಕಾರ ಕೊಟ್ಟಿದ್ದು ಕೇವಲ ₹ 1,654 ಕೋಟಿ. ಈ ವರ್ಷ ಇದುವರೆಗೆ ₹ 4,000 ಕೋಟಿ ಮಾತ್ರ ಪರಿಹಾರ ಕೇಳಲಾಗಿದೆ. ಕೇಂದ್ರದಿಂದ ಪರಿಹಾರ ಕೇಳುವುದಕ್ಕೂ ಭಯವಾ?’ ಎಂದು ಆಗ್ರಹಿಸಿದ್ದಾರೆ.
‘ಈ ವರ್ಷ ಅತಿವೃಷ್ಟಿಯಿಂದಾ ದ ಹಾನಿಯ ಸಮೀಕ್ಷೆ ಮಾಡಿಲ್ಲ. ಮುಖ್ಯಮಂತ್ರಿ, ಸಚಿವರು ಚುನಾ ವಣಾ ಪ್ರಚಾರದಲ್ಲಿ ತಲ್ಲೀನ
ರಾಗಿದ್ದಾರೆ. ಉಸ್ತುವಾರಿ ಸಚಿವರು, ಜಿಲ್ಲೆಯ ಅಧಿಕಾರಿಗಳು ಮನೆಗಳಲ್ಲಿ ಹಾಯಾಗಿದ್ದಾರೆ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.