ADVERTISEMENT

ಶಾಲಾ ಅಕ್ರಮ ಆರಂಭಿಸಿದ್ದೇ ಸಿದ್ದರಾಮಯ್ಯ: ಸಚಿವ ನಾಗೇಶ್‌

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2022, 16:50 IST
Last Updated 12 ಸೆಪ್ಟೆಂಬರ್ 2022, 16:50 IST
   

ಬೆಂಗಳೂರು: ಖಾಸಗಿ ಸಿಬಿಎಸ್‌ಸಿ ಶಾಲೆಗಳ ಆರಂಭಕ್ಕೆ ಎನ್‌ಒಸಿ ನೀಡಲು ನಿಯಮಗಳನ್ನೇ ರೂಪಿಸದೆ ಅನಧಿಕೃತವಾಗಿ ಹಲವು ಶಾಲೆಗಳನ್ನು ಆರಂಭಿಸಲು ಅವಕಾಶ ಮಾಡಿಕೊಟ್ಟು, ಅಕ್ರಮಕ್ಕೆ ಕುಮ್ಮಕ್ಕು ನೀಡಿದ್ದೇ ಸಿದ್ದರಾಮಯ್ಯ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ದೂರಿದ್ದಾರೆ.

ತಮಿಳುನಾಡಿನ ಕುಂಭಕೋಣಂನ ಶಾಲೆಯೊಂದರಲ್ಲಿ ನಡೆದಿದ್ದ ಅಗ್ನಿದುರಂತದ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸುಪ್ರೀಂಕೋರ್ಟ್‌ ಆದೇಶದ ಅನುಸಾರ ರಾಜ್ಯ ಸರ್ಕಾರ ನಿಯಮಾವಳಿ ರೂಪಿಸಿದೆ. ಅದಕ್ಕೆ ಅನುಗುಣವಾಗಿ ಶಾಲಾ ನವೀಕರಣದ ಸಮಯದಲ್ಲಿ ಸಗ್ನಿ ಸುರಕ್ಷತಾ ಕ್ರಮಗಳ ಕುರಿತು ಪ್ರಮಾಣ ಪತ್ರ ಸಲ್ಲಿಸಬೇಕಿದೆ. ನಿಯಮಗಳನ್ನು ಪಾಲಿಸದ ಶಿಕ್ಷಣ ಸಂಸ್ಥೆಗಳು ಭ್ರಷ್ಟಾಚಾರ ಎಂದು ಬಿಂಬಿಸಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಪಾರದರ್ಶಕ, ಪ್ರಾಮಾಣಿಕ, ಸುರಕ್ಷಿತ ಶೈಕ್ಷಣಿಕ ವಾತಾವರಣ ನಿರ್ಮಿಸಲು ಹೊರಟ ಬಿಜೆಪಿ ಸರ್ಕಾರದ ವಿರುದ್ಧ, ಕ್ರಿಮಿನಲ್‌ ಪ್ರಕರಣ ಸೇರಿ ಹಲವು ಆರೋಪ ಎದುರಿಸುತ್ತಿರುವ ಬೆಂಗಲಿಗನ ಮೂಲಕ ಕಾಂಗ್ರೆಸ್ ಆಧಾರ ರಹಿತ ಆರೋಪ ಮಾಡುತ್ತಿದೆ. ಸಿದ್ದರಾಮಯ್ಯ ಅವರಿಗೆ ಮಾತನಾಡಲು ಯಾವ ನೈತಿಕತೆ ಇದೆ ಎಂದು ಕುಟುಕಿದ್ದಾರೆ.

ADVERTISEMENT

ಖಾಸಗಿ ಶಾಲೆ ಮಾನ್ಯತೆ ಮತ್ತು ನವೀಕರಣ ಪ್ರಕ್ರಿಯೆಯನ್ನು ಆನ್‌ಲೈನ್‌ ಮೂಲಕ ಪಾರದರ್ಶಕವಾಗಿ ನಡೆಸಲಾಗುತ್ತಿದೆ. ಆದರೆ, ಶಿಸ್ತುಬದ್ಧ ಅವ್ಯವಸ್ಥೆಯ ಅನುಷ್ಠಾನದ ವಿರುದ್ಧವೇ ನಿಂತು ಸಂಘಟನೆಯ ಅಧ್ಯಕ್ಷನೆಂದು ಹೇಳಿಕೊಂಡು ಓಡಾಡುವ ಬೂಟಾಟಿಕೆಯ ವ್ಯಕ್ತಿಯ ಅಕ್ರಮದಲ್ಲಿ ಸಿದ್ದರಾಮಯ್ಯ ಅವರ ಪಾಲೆಷ್ಟು ಎಂದು ಟ್ವೀಟ್‌ ಮಾಡಿ ಕಾಲೆಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.