ಬೆಂಗಳೂರು: ಸಿ.ಡಿ.ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳ ಎದುರು ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ವಿಚಾರಣೆಗೆ ಶುಕ್ರವಾರ ಹಾಜರಾದರು.
ರಮೇಶ ಜಾರಕಿಹೊಳಿ ಅವರಿಗೆ ಸಂಬಂಧಪಟ್ಟಿದ್ದು ಎನ್ನಲಾದ ಸಿ.ಡಿ ಪ್ರಕರಣದಲ್ಲಿ ಮಾಹಿತಿ ಪಡೆಯುವ ಸಲುವಾಗಿ ವಿಚಾರಣೆಗೆ ಬರುವಂತೆ ಎಸ್ಐಟಿ ನೋಟಿಸ್ ನೀಡಿತ್ತು.
‘ಈ ಸಂಬಂಧ ಆಡುಗೋಡಿಯಲ್ಲಿರುವ ಟೆಕ್ನಿಕಲ್ ಸೆಲ್ನಲ್ಲಿ ಎಸ್ಐಟಿ ಅಧಿಕಾರಿಗಳ ಎದುರು ರಮೇಶ ಜಾರಕಿಹೊಳಿ ಹಾಜರಾದರು. ಪ್ರಕರಣ ಸಂಬಂಧ ಹಲವು ಮಾಹಿತಿ ಸಂಗ್ರಹಿಸಲು ಸತತ ನಾಲ್ಕು ಗಂಟೆಗಳವರೆಗೆ ಎಸ್ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದರು. ವಿಚಾರಣೆಯಲ್ಲಿ ವಿಡಿಯೊ ಹಾಗೂ ಅದರಲ್ಲಿದ್ದ ಯುವತಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ರಮೇಶ ಅವರಿಗೆ ಕೇಳಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ಸಿ.ಡಿ ವಿಚಾರ ಮುಂದಿಟ್ಟುಕೊಂಡು ಹಣಕ್ಕಾಗಿ ಬ್ಲಾಕ್ಮೇಲ್ ಮಾಡಿದ್ದಾರೆ. ಈ ಸಂಬಂಧನ್ಯಾಯ ದೊರಕಿಸಿಕೊಡುವಂತೆ ಕೋರಿ ಸದಾಶಿವನಗರ ಪೊಲೀಸ್ ಠಾಣೆಗೆರಮೇಶ ದೂರು ನೀಡಿದ್ದರು.
ಪ್ರಕರಣ ಕೈಗೆತ್ತಿಕೊಂಡಿರುವ ಎಸ್ಐಟಿ ಅಧಿಕಾರಿಗಳುರಮೇಶ ಅವರ ಮನೆಗೆ ತೆರಳಿ ಹೇಳಿಕೆಯೂ ಪಡೆದಿದ್ದರು. ಆ ವೇಳೆ ಅವರು ನೀಡಿದ್ದ ಹೇಳಿಕೆಯಲ್ಲಿ ಗೊಂದಲಗಳು ಕಂಡುಬಂದಿದ್ದರಿಂದ ಅವುಗಳ ಸ್ಪಷ್ಟನೆಗೆ ಮತ್ತೊಮ್ಮೆ ವಿಚಾರಣೆಗೆ ಬರುವಂತೆ ಎಸ್ಐಟಿ ಅಧಿಕಾರಿಗಳುರಮೇಶಗೆ ನೋಟಿಸ್ ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.