ADVERTISEMENT

ಕ್ರಷರ್ ಕಾಯ್ದೆ ತಿದ್ದುಪಡಿಗೆ ಸುಗ್ರೀವಾಜ್ಞೆ : ಹೈಕೋರ್ಟ್ ನೋಟಿಸ್

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 19:47 IST
Last Updated 24 ಜುಲೈ 2020, 19:47 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಲಾಕ್‌ಡೌನ್ ಅವಧಿಯಲ್ಲಿ ಕರ್ನಾಟಕ ಜಲ್ಲಿ ಕ್ರಷರ್‌ಗಳ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರಲು ಸುಗ್ರೀವಾಜ್ಞೆ ತಂದಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಲು ಹೈಕೋರ್ಟ್ ಆದೇಶಿಸಿದೆ.

ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ವಿಭಾಗೀಯ ಪೀಠ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ನೋಟಿಸ್ ಜಾರಿ ಮಾಡಲು ಆದೇಶಿಸಿತು.

ಸುಗ್ರೀವಾಜ್ಞೆ ಪ್ರಶ್ನಿಸಿಚಿಕ್ಕಬಳ್ಳಾಪುರ ಜಿಲ್ಲೆಯ ಪಟ್ರೇನಹಳ್ಳಿ ಗ್ರಾಮದ ಆರ್. ಆಂಜನೇಯ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ‘ಲಾಕ್‌ಡೌನ್ ಅವಧಿಯಲ್ಲಿ ತುರ್ತಾಗಿ ತಿದ್ದುಪಡಿ ಕೈಗೊಳ್ಳಬೇಕಾದ ಯಾವುದೇ ಸಾರ್ವಜನಿಕ ತುರ್ತು ಇರಲಿಲ್ಲ‍’ ಎಂದು ಹೇಳಿದ್ದಾರೆ.

ADVERTISEMENT

‘1998ರಲ್ಲಿ ಹೈಕೋರ್ಟ್ ನೀಡಿದ್ದ ಆದೇಶದ ಆಧಾರದಲ್ಲಿ ಕ್ರಷರ್ ಕಾಯ್ದೆಯನ್ನು ರಾಜ್ಯ ಸರ್ಕಾರ ರೂಪಿಸಿದೆ. ಕೆಲವು ಷರತ್ತುಗಳನ್ನು ವಿಧಿಸಿ ಅವುಗಳನ್ನು ಕಾಯ್ದಯಲ್ಲಿ ಸೇರಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಅವುಗಳಿಗೆ ವಿರುದ್ಧವಾಗಿ ಕೆಲವು ತಿದ್ದುಪಡಿಗಳನ್ನು ಸರ್ಕಾರ ಮಾಡಿಕೊಂಡು ಬಂದಿದೆ’ ಎಂದು ಅರ್ಜಿದಾರರು ದೂರಿದ್ದಾರೆ.

‘ಕಾಯ್ದೆ ರೂಪಿಸುವಾಗ ಕ್ರಷರ್ ಪರವಾನಗಿ ಅವಧಿಯನ್ನು ಒಂದು ವರ್ಷಕ್ಕೆ ಸೀಮಿತಗೊಳಿಸಿ ಪ್ರತಿವರ್ಷ ಶುಲ್ಕ ಪಾವತಿಸಿ ನವೀಕರಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಹೈಕೋರ್ಟ್ ತಿಳಿಸಿತ್ತು. ಆ ಪ್ರಕಾರ ರೂಪಿಸಲಾಗಿದ್ದಈ ಕಾಯ್ದೆಯ ಸೆಕ್ಷನ್ 5ಕ್ಕೆ ಈಗ ತಿದ್ದುಪಡಿ ತರಲಾಗಿದ್ದು, ಪರವಾನಗಿ ಅವಧಿಯನ್ನು 20 ವರ್ಷಗಳಿಗೆ ಹಿಗ್ಗಿಸಲಾಗಿದೆ. ಇದರಿಂದ ಪರವಾನಗಿ ಒಬ್ಬರ ಆಸ್ತಿಯಾಗಲಿದೆ’ ಎಂದು ಅರ್ಜಿದಾರರು ಹೇಳಿದ್ದಾರೆ.

‘ತಿದ್ದುಪಡಿಯುಸುರಕ್ಷಿತ ವಲಯ ಮೀರಿ ಕ್ರಷರ್ ತೆರೆಯಲು ಅವಕಾಶ ನೀಡಲಿದೆ. ಪರವಾನಗಿ ವರ್ಗಾವಣೆಗೂ ಅವಕಾಶ ಇದೆ. ಅನಗತ್ಯವಾಗಿ ಪರವಾನಗಿ ಪಡೆದು ಲಾಭ ಮಾಡಿಕೊಳ್ಳುವವರಿಗೆ ಅನುಕೂಲ ಆಗಲಿದೆ ಮತ್ತು ವ್ಯಾಜ್ಯಗಳಿಗೂ ಕಾರಣವಾಗಲಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.