ADVERTISEMENT

ವಿವಿಧೆಡೆ ಬಸ್‌ಗೆ ಕಲ್ಲು: ಸಂಚಾರ ಬಂದ್

ಪ್ರಯಾಣಿಕರ ಪರದಾಟ, ಪರ್ಯಾಯ ವ್ಯವಸ್ಥೆಗೆ ಕಲಬುರ್ಗಿಯಲ್ಲಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 19:30 IST
Last Updated 11 ಡಿಸೆಂಬರ್ 2020, 19:30 IST
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಪ್ರತಿಭಟನೆಯಿಂದ ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದ ಕಾರಣ ಕಲಬುರ್ಗಿ ಬಸ್‌ ನಿಲ್ದಾಣದಲ್ಲಿ ಪರದಾಡಿದ ಪ್ರಯಾಣಿಕರು
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಪ್ರತಿಭಟನೆಯಿಂದ ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದ ಕಾರಣ ಕಲಬುರ್ಗಿ ಬಸ್‌ ನಿಲ್ದಾಣದಲ್ಲಿ ಪರದಾಡಿದ ಪ್ರಯಾಣಿಕರು   

ಬೆಂಗಳೂರು: ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ಸಂಸ್ಥೆಯ ನೌಕರರು ಕೈಗೊಂಡಿರುವ ಮುಷ್ಕರದಿಂದಾಗಿ ಶುಕ್ರವಾರ ವಿವಿಧೆಡೆ ಪ್ರಯಾಣಿಕರು ‍ಪರದಾಡಿದರು. ಮುಷ್ಕರ ಬಹುತೇಕ ಯಶಸ್ವಿಯಾಗಿದೆ.

ಕಲಬುರ್ಗಿ, ಕೋಲಾರ, ಮೈಸೂರು, ಹುಬ್ಬಳ್ಳಿ, ಕೋಲಾರ, ವಿಜಯಪುರ ಜಿಲ್ಲೆಯಲ್ಲಿ ಕೆಲವೆಡೆ ಕಿಡಿಗೇಡಿಗಳು ಬಸ್‌ಗಳ ಮೇಲೆ ಕಲ್ಲು ತೂರಿದ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಸಾಮಾನ್ಯವಾಗಿತ್ತು.

ಕಲಬುರ್ಗಿ, ರಾಯಚೂರು ಮತ್ತು ಕೊಪ್ಪಳದಲ್ಲಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು. ಸಿಟ್ಟಿಗೆದ್ದ ಪ್ರಯಾಣಿಕರುಕಲಬುರ್ಗಿಯಲ್ಲಿ ಪರ್ಯಾಯ ವ್ಯವಸ್ಥೆ ಮಾಡುವಂತೆ ಸಾರಿಗೆ ಅಧಿಕಾರಿಗಳಿಗೆ ಒತ್ತಾಯಿಸಿದರು. ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಏಳು ಜಿಲ್ಲೆಗಳಲ್ಲಿ 2,247 ರೂಟ್‌ಗಳ ಪೈಕಿ 839 ರೂಟ್‌ಗಳಲ್ಲಿ ಬಸ್‌ ಸಂಚಾರ ರದ್ದುಪಡಿಸಲಾಯಿತು.

ADVERTISEMENT

ಮೈಸೂರು ವರದಿ: 9 ಬಸ್‌ಗಳಿಗೆ ಕಲ್ಲು

ಮೈಸೂರು ನಗರ/ಗ್ರಾಮೀಣ ವಿಭಾಗ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡುವೆಯೂ ಸಂಚರಿಸುತ್ತಿದ್ದ, ಒಂಬತ್ತು ಬಸ್‌ಗಳ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದು, ಚಾಲಕರೊಬ್ಬರಿಗೆ ಪೆಟ್ಟಾಗಿದೆ.

ಮಂಡ್ಯ ಜಿಲ್ಲೆಯಲ್ಲಿ ಶೇ 90ರಷ್ಟು ಮಾರ್ಗಗಳಲ್ಲಿ ಬಸ್‌ ಸಂಚಾರ ಸ್ಥಗಿತಗೊಂಡಿತ್ತು. ಕೊಡಗು ಜಿಲ್ಲೆಯಲ್ಲಿ ಯಶಸ್ವಿಯಾಗಿದ್ದು, ಮಡಿಕೇರಿಯಲ್ಲಿ ನೌಕರರು ಉರುಳುಸೇವೆ ಮಾಡಿ ಗಮನಸೆಳೆದರು. ಗುಂಡ್ಲುಪೇಟೆ ಹೊರತುಪಡಿಸಿ ಚಾಮರಾಜನಗರ ಜಿಲ್ಲೆಯಲ್ಲಿ ಸಂಚಾರ ವ್ಯತ್ಯಯವಾಗಿಲ್ಲ. ಹಾಸನ ಜಿಲ್ಲೆಯಲ್ಲಿ ಬೆಳಿಗ್ಗೆ ಶೇ 30ರಷ್ಟು ಬಸ್ಸುಗಳು ಸಂಚರಿಸಲಿಲ್ಲ.

ಹುಬ್ಬಳ್ಳಿ ವರದಿ- ಸಂಚಾರ ಸ್ಥಗಿತ:ವಾಯವ್ಯ ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಹಲವೆಡೆ ಸಿಟಿ ಬಸ್‌ಗಳ ಸಂಚಾರ ಮುಂದುವರೆದಿತ್ತು. ಹೊಸಪೇಟೆಯಲ್ಲಿ ಕೆಎಸ್‌ಆರ್‌ಟಿಸಿ ನೌಕರರ ಒಕ್ಕೂಟ ಹೋರಾಟಕ್ಕೆ ಬೆಂಬಲ ಸೂಚಿಸಿರಲಿಲ್ಲ, ಕೆಲ ಭಾಗಗಳಲ್ಲಿ ಸೀಮಿತ ಬಸ್‌ ಸಂಚಾರ ಇತ್ತು.

ಗೋವಾ, ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಬೆಳಗಾವಿಗೆ ಆ ರಾಜ್ಯಗಳ ಬಸ್‌ ಸಂಪರ್ಕ ಕಡಿತಗೊಂಡಿದ್ದರಿಂದ ಅಂತರರಾಜ್ಯ ಪ್ರಯಾಣಿಕರಿಗೂ ಹುಬ್ಬಳ್ಳಿಯಲ್ಲಿ ಮುಷ್ಕರದ ಬಿಸಿ ಮುಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.