ADVERTISEMENT

ಸಮೀಕ್ಷೆದಾರರಿಗೆ ನನ್ನ ಜಾತಿ ಮಾದಿಗ ಎನ್ನಿ; ಎಚ್. ಆಂಜನೇಯ

ಮಾದಿಗ ಮುಖಂಡರ ಜಾಗೃತಿ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್. ಆಂಜನೇಯ

​ಪ್ರಜಾವಾಣಿ ವಾರ್ತೆ
Published 3 ಮೇ 2025, 15:29 IST
Last Updated 3 ಮೇ 2025, 15:29 IST
ಮಾದಿಗ ಮುಖಂಡರ ಜಾಗೃತಿ ಕಾರ್ಯಕ್ರಮದಲ್ಲಿ ‘ಜಾತಿ ಸಮೀಕ್ಷೆ ವೇಳೆ ಬರೆಯಿಸಿ ನಮ್ಮ ಜಾತಿ ಮಾದಿಗ’ ಎಂಬ ಭಿತ್ತಿಪತ್ರ, ಕರಪತ್ರವನ್ನು ಎಚ್.ಆಂಜನೇಯ ಬಿಡುಗಡೆ ಮಾಡಿದರು
ಮಾದಿಗ ಮುಖಂಡರ ಜಾಗೃತಿ ಕಾರ್ಯಕ್ರಮದಲ್ಲಿ ‘ಜಾತಿ ಸಮೀಕ್ಷೆ ವೇಳೆ ಬರೆಯಿಸಿ ನಮ್ಮ ಜಾತಿ ಮಾದಿಗ’ ಎಂಬ ಭಿತ್ತಿಪತ್ರ, ಕರಪತ್ರವನ್ನು ಎಚ್.ಆಂಜನೇಯ ಬಿಡುಗಡೆ ಮಾಡಿದರು   

ಬೆಂಗಳೂರು: ‘ಪರಿಶಿಷ್ಟ ಜಾತಿಯವರ ಗಣತಿಗಾಗಿ ಸಮೀಕ್ಷೆದಾರರು ಮನೆಗೆ ಬಂದಾಗ 'ನಾವು, ಕೋಡ್ 61– ಮಾದಿಗ’ ಎಂದು ಹೇಳಬೇಕು. ಈ ಮೂಲಕ ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚು ಮೀಸಲಾತಿ ಪಡೆಯುವ ಪ್ರಯತ್ನ ಮಾಡಬೇಕಿದೆ’ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.

ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾದಿಗ ಮುಖಂಡರ ಜಾಗೃತಿ ಕಾರ್ಯಕ್ರಮದಲ್ಲಿ ‘ಜಾತಿ ಸಮೀಕ್ಷೆ ವೇಳೆ ಬರೆಯಿಸಿ– ನಮ್ಮ ಜಾತಿ ಮಾದಿಗ’ ಎಂಬ ಭಿತ್ತಿಪತ್ರ, ಕರಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಜಾತಿ ಸಮೀಕ್ಷೆದಾರರು ಮೇ 5ರಿಂದ 17ರವರೆಗೆ ಮನೆಗಳಿಗೆ ಭೇಟಿ ನೀಡಲಿದ್ದು, ಮಾದಿಗ ಸಮುದಾಯದವರು ಮನೆಯಲ್ಲೇ ಇದ್ದು ಮಾದಿಗ ಎಂದು ನಮೂದಿಸಬೇಕು. 30 ವರ್ಷದ ಹೋರಾಟದ ಫಲವಾಗಿ ಒಳ ಮೀಸಲಾತಿ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದು, ನಾವೆಲ್ಲ ಈಗ ಜಾತಿ ಸಮೀಕ್ಷೆಯನ್ನು ಶೇ 100ರಷ್ಟು ಯಶಸ್ವಿಗೊಳಿಸಬೇಕಿದೆ’ ಎಂದರು.

ADVERTISEMENT

‘ರಾಜ್ಯದಲ್ಲಿ ಪರಿಶಿಷ್ಟ ಸಮುದಾಯದಲ್ಲಿನ ಕೆಲವರು ನಮ್ಮ ಜನಸಂಖ್ಯೆ ಹೆಚ್ಚು ಇದೆ ಎನ್ನುತ್ತಿದ್ದಾರೆ. ಆದರೆ, ವಾಸ್ತವವಾಗಿ ಮಾದಿಗರ ಸಂಖ್ಯೆ ಹೆಚ್ಚಿದೆ. ನಮ್ಮಲ್ಲಿ ಜಾಗೃತಿ ಕೊರತೆಯಿಂದ ಹಿಂದುಳಿದಿದ್ದೇವೆ. ಈಗ ಜಾತಿ ಸಮೀಕ್ಷೆ ಬಳಿಕ ಎಲ್ಲ ಸತ್ಯ ಹೊರಬೀಳಲಿದೆ. ಅವರವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಆಗಲಿದೆ’ ಎಂದು ಹೇಳಿದರು.

‘ಬೆಂಗಳೂರಿನಲ್ಲಿ ಮಾದಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದೇವೆ ಎಂದು ಭಾಷಣ, ಮಾತುಗಳಲ್ಲಿ ಹೇಳುತ್ತಿದ್ದೀರಿ. ಅದನ್ನು ದಾಖಲೆ ರೂಪದಲ್ಲಿ ತೋರಿಸಲು ಮಾದಿಗ ಸಮುದಾಯದ ಸಂಘಟನೆ, ಮುಖಂಡರು ಪ್ರತಿ ಬಡಾವಣೆ, ಮನೆಗಳಿಗೆ ಭೇಟಿ ನೀಡಿ ನಮ್ಮ ಜಾತಿ ಮಾದಿಗ ಎಂದು ಹೆಮ್ಮೆಯಿಂದ ಹೇಳುವಂತೆ ಜಾಗೃತಿ ಮೂಡಿಸಬೇಕು’ ಎಂದರು.

ನಿವೃತ್ತ ಐಎಎಸ್ ಅಧಿಕಾರಿ ಬಿ.ಎಚ್.ಅನಿಲ್‌ಕುಮಾರ್, ನಿವೃತ್ತ ಐಆರ್‌ಎಸ್ ಅಧಿಕಾರಿ ಭೀಮಾಶಂಕರ್, ಆದಿಜಾಂಬವ ಸಂಘದ ಅಧ್ಯಕ್ಷ ಭೀಮರಾಜ್, ಮಾದಿಗ ದಂಡೋರದ ಮುಖಂಡ ಶ್ರೀನಿವಾಸ್, ಅಹಿಂದ ನಾಯಕ ಮುತ್ತುರಾಜ್, ಮುಖಂಡರಾದ ಸುಬ್ಬರಾಯುಡು, ನಾರಾಯಣ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.