ADVERTISEMENT

ಸ್ನೇಹಿತನ ಜೊತೆ ಸೇರಿ ಪತಿ ಹತ್ಯೆ

ಮಹಿಳೆ ಸೇರಿ ಇಬ್ಬರನ್ನು ಬಂಧಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2021, 16:51 IST
Last Updated 15 ಮಾರ್ಚ್ 2021, 16:51 IST

ಬೆಂಗಳೂರು: ವರ್ತೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಚಂದ್ರಶೇಖರ್ (40) ಎಂಬುವರ ಕೊಲೆ ಪ್ರಕರಣ ಭೇದಿಸಿರುವ ಪೊಲೀಸರು, ಅವರ ಪತ್ನಿ ಪುಷ್ಪಾವತಿ (38) ಹಾಗೂ ಆಕೆಯ ಸ್ನೇಹಿತ ಮನು (42) ಅವರನ್ನು ಬಂಧಿಸಿದ್ದಾರೆ.

‘ಆರೋಪಿ ಪುಷ್ಪಾವತಿ ಹಾಗೂ ಮನು ಸಲುಗೆಯಿಂದ ಇದ್ದರು. ಆಗಾಗ ಒಟ್ಟಿಗೆ ಸೇರುತ್ತಿದ್ದರು. ಹಲವೆಡೆ ಸುತ್ತಾಡುತ್ತಿದ್ದರು. ತಮ್ಮ ಸಲುಗೆಗೆ ಅಡ್ಡಿಪಡಿಸಿದ್ದರೆಂಬ ಕಾರಣಕ್ಕೆ ಚಂದ್ರಶೇಖರ್ ಅವರನ್ನು ಫೆ. 21ರಂದು ಕೊಲೆ ಮಾಡಿದ್ದರು’ ಎಂದು ವರ್ತೂರು ಪೊಲೀಸರು ಹೇಳಿದರು.

ತಲೆಗೆ ಪೆಟ್ಟಾಗಿ ಮನೆಯಲ್ಲೇ ವಿಶ್ರಾಂತಿ: ‘ಠಾಣೆ ವ್ಯಾಪ್ತಿಯ ಸಿದ್ದಾಪುರ ನಿವಾಸಿ ಚಂದ್ರಶೇಖರ್, ಕಂಪನಿಯೊಂದರಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದರು. ಕೆಲ ವರ್ಷಗಳ ಹಿಂದಷ್ಟೇ ಪುಷ್ಪಾವತಿ ಅವರನ್ನು ಮದುವೆಯಾಗಿದ್ದರು’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ತಲೆ ಸುತ್ತಿ ಬಿದ್ದಿದ್ದ ಚಂದ್ರಶೇಖರ್ ತಲೆಗೆ ತೀವ್ರ ಪೆಟ್ಟಾಗಿತ್ತು. ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದ ಅವರು ಎರಡ್ಮೂರು ವರ್ಷಗಳಿಂದ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದರು.’

‘ಇಂಥ ಸಂದರ್ಭದಲ್ಲೇ ಪುಷ್ಪಾವತಿ, ಪಕ್ಕದ ಮನೆಯ ಮನು ಜೊತೆ ಸ್ನೇಹ ಬೆಳೆಸಿದ್ದಳು. ಇಬ್ಬರ ನಡುವೆ ಸಲುಗೆ ಏರ್ಪಟ್ಟಿತ್ತು. ಅದೇ ವಿಚಾರವಾಗಿ ದಂಪತಿ ನಡುವೆ ಹಲವು ಬಾರಿ ಜಗಳ ಆಗಿತ್ತು. ಅದೇ ವಿಚಾರವನ್ನು ಮನು ಬಳಿ ಪ್ರಸ್ತಾಪಿಸಿದ್ದ ಪುಷ್ಪಾವತಿ, ಪತಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಳು’ ಎಂದೂ ಪೊಲೀಸರು ಹೇಳಿದರು.

ಅಸಹಜ ಸಾವೆಂದು ಕಥೆ ಕಟ್ಟಿದ್ದಳು; ‘ಫೆ. 21ರಂದು ಮನೆಯಲ್ಲೇ ಚಂದ್ರಶೇಖರ್ ಮೇಲೆ ದಾಳಿ ಮಾಡಿದ್ದ ಆರೋಪಿಗಳು, ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಕೊಂದಿದ್ದರು. ನಂತರ ಮೃತದೇಹವನ್ನು ಸ್ನಾನದ ಕೊಠಡಿಯಲ್ಲಿ ಇರಿಸಿದ್ದರು. ಸ್ನಾನ ಮಾಡುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ಪತಿ ಮೃತಪಟ್ಟಿದ್ದಾರೆಂದು ಪುಷ್ಪಾವತಿ ಕಥೆ ಕಟ್ಟಿದ್ದಳು’ ಎಂದೂ ಪೊಲೀಸರು ತಿಳಿಸಿದರು.

‘ಪುಷ್ಪಾವತಿ ಮಾತು ನಂಬಿದ್ದ ಚಂದ್ರಶೇಖರ್ ಅವರ ಸಂಬಂಧಿಕರು, ಮೃತದೇಹವನ್ನು ತಮ್ಮೂರಿಗೆ ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ನೆರವೇರಿಸಿದ್ದರು. ಆದರೆ, ಪುಷ್ಪಾವತಿ ಹಾಗೂ ಮನು ನಡುವಿನ ಸಲುಗೆ ವಿಚಾರ ಇತ್ತೀಚೆಗೆ ಸಂಬಂಧಿಕರಿಗೆ ಗೊತ್ತಾಗಿತ್ತು. ಸೂಕ್ತ ತನಿಖೆ ಮಾಡುವಂತೆ ಸಂಬಂಧಿಕರು ಕೋರಿದ್ದರು. ಅದೇ ಆಧಾರದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡರು’ ಎಂದೂ ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.