ADVERTISEMENT

ಅಫ್ಗಾನಿಸ್ತಾನ: ಭಾರತದ ಏಳು ಎಂಜಿನಿಯರ್‌ಗಳ ಅಪಹರಣ

ಪಿಟಿಐ
Published 6 ಮೇ 2018, 19:30 IST
Last Updated 6 ಮೇ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ/ ಕಾಬೂಲ್‌: ಅಫ್ಗಾನಿಸ್ತಾನದ ಉತ್ತರ ಭಾಗದ ಬಘ್ಲಾನ್‌ ಪ್ರಾಂತ್ಯದ ವಿದ್ಯುತ್‌ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಭಾರತದ ಏಳು ಎಂಜಿನಿಯರ್‌ಗಳನ್ನು ತಾಲಿಬಾನ್‌ ಉಗ್ರರು ಭಾನುವಾರ ಬೆಳಿಗ್ಗೆ ಅಪಹರಿಸಿದ್ದಾರೆ.

ಇವರು ಸರ್ಕಾರಿ ಉದ್ಯೋಗಿಗಳು ಎಂದು ತಪ್ಪಾಗಿ ಭಾವಿಸಿ ಅಪಹರಿಸಲಾಗಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಅಫ್ಗಾನಿಸ್ತಾನ ಸರ್ಕಾರದ ಜತೆ ಸಂಪರ್ಕದಲ್ಲಿದ್ದೇವೆ. ಘಟನೆಗೆ ಸಂಬಂಧಿಸಿದ ಮಾಹಿತಿಗಳನ್ನು ದೃಢೀಕರಿಸುವ ಪ್ರಯತ್ನ ನಡೆಯುತ್ತಿದೆ ಎಂದು ವಿದೇಶಾಂಗ ಸಚಿವಾಲಯವು ದೆಹಲಿಯಲ್ಲಿ ತಿಳಿಸಿದೆ.

ಪ್ರಾಂತ್ಯದ ರಾಜಧಾನಿ ಪುಲ್‌–ಎ–ಖೋಮ್ರೆಯ ಬಘ್‌–ಎ–ಶಮಲ್‌ ಎಂಬ ಲ್ಲಿರುವ ಕೆಇಸಿ ಎಂಬ ಭಾರತೀಯ ಕಂಪನಿಯಲ್ಲಿ ಈ ಏಳು ಮಂದಿ ಕೆಲಸ ಮಾಡುತ್ತಿದ್ದರು.

ADVERTISEMENT

ಕಂಪನಿಯ ವಿದ್ಯುತ್‌ ಉಪ ಕೇಂದ್ರವೊಂದರತ್ತ ಪ್ರಯಾಣಿಸುತ್ತಿದ್ದಾಗ ಇವರನ್ನು ಅಪಹರಿಸಲಾಗಿದೆ. ಇವರು ಪ್ರಯಾಣಿಸುತ್ತಿದ್ದ ವಾಹನದ ಚಾಲಕನನ್ನೂ ಅಪಹರಿಸಲಾಗಿದೆ. ಚಾಲಕ ಅಫ್ಗಾನಿಸ್ತಾದ ಪ್ರಜೆ. ಪುಲ್‌–ಎ–ಖುಮ್ರಿ ನಗರದ ದಂದ್‌–ಎ–ಶಹಾಬುದ್ದೀನ್‌ ಎಂಬಲ್ಲಿಗೆ ಇವರನ್ನು ಒಯ್ಯಲಾಗಿದೆ ಎಂದು ಪ್ರಾಂತ್ಯದ ಗವರ್ನರ್‌ ಅಬ್ದುಲ್ಲಾಹಿ ತಿಳಿಸಿದ್ದಾರೆ ಎಂದು ಟೊಲೊ ನ್ಯೂಸ್‌ ವರದಿ ಮಾಡಿದೆ.

ಸಂಧಾನ ಯತ್ನ

ಸ್ಥಳೀಯರ ಮೂಲಕ ತಾಲಿಬಾನ್‌ ಮುಖಂಡರ ಜತೆ ಮಾತುಕತೆ ನಡೆಸಲಾಗಿದೆ. ಸರ್ಕಾರಿ ಉದ್ಯೋಗಿಗಳು ಎಂಬ ತಪ್ಪುಗ್ರಹಿಕೆಯಿಂದ ಈ ಏಳು ಮಂದಿಯನ್ನು ಅಪಹರಿಸಲಾಗಿದೆ ಎಂದು ಅವರು ಹೇಳಿದ್ದಾರೆ ಎಂದು ನೇಮತಿ ತಿಳಿಸಿದ್ದಾರೆ.

ಯಾವುದೇ ಭಯೋತ್ಪಾದಕ ಸಂಘಟನೆ ಅಪಹರಣದ ಹೊಣೆ ಹೊತ್ತುಕೊಂಡಿಲ್ಲ.

ಸಂಧಾನದ ಮೂಲಕ ಅಪಹೃತರ ಬಿಡುಗಡೆ ಪ್ರಯತ್ನ ನಡೆಯುತ್ತಿದೆ. ಬುಡಕಟ್ಟು ಮುಖಂಡರನ್ನು ಮಾತುಕತೆಗೆ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.