ಮೊಗದಿಶು (ಐಎಎನ್ಎಸ್): ಶಿಕ್ಷಣ ಸಚಿವಾಲಯದ ಬಳಿಯ ಸರ್ಕಾರಿ ಕಟ್ಟಡವನ್ನು ಗುರಿಯಾಗಿಕೊಂಡು ನಡೆಸಿದ ಆತ್ಮಹತ್ಯಾ ಕಾರ್ಬಾಂಬ್ ದಾಳಿಯಲ್ಲಿ ಕನಿಷ್ಠ 70 ಮಂದಿ ಮೃತಪಟ್ಟ ಘಟನೆ ಮಂಗಳವಾರ ಇಲ್ಲಿ ನಡೆದಿದೆ.
ಇದೊಂದು ಭಾರಿ ಸ್ಫೋಟವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ತುರ್ತು ಸೇವಾ ಘಟಕದ ಮುಖ್ಯಸ್ಥ ಅಲಿ ಮೂಸ್ ಹೇಳಿದ್ದಾರೆ. `ಸಚಿವಾಲಯದ ಕಟ್ಟದ ಸುತ್ತ ಭಾರಿ ಸ್ಫೋಟದ ಸದ್ದು ಕೇಳಿಸಿತು. ಮೃತದೇಹಗಳು ಛಿದ್ರಗೊಂಡು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು~ ಎಂದು ಪ್ರತ್ಯಕ್ಷದರ್ಶಿ ಒಮರ್ ಫಿದಿಕ್ ಹೇಳಿದ್ದಾರೆ
ಉಗ್ರರ ದಾಳಿ: 13 ಜನರ ಹತ್ಯೆ
ಇಸ್ಲಾಮಾಬಾದ್, (ಪಿಟಿಐ): ನೈರುತ್ಯ ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಶಿಯಾ ಮುಸ್ಲಿಮರು ಪ್ರಯಾಣಿಸುತ್ತಿದ್ದ ಬಸ್ ಮೇಲೆ ಉಗ್ರಗಾಮಿಗಳು ಮಂಗಳವಾರ ದಾಳಿ ಮಾಡಿದ್ದು, 13 ಜನರು ಮೃತಪಟ್ಟು ಏಳು ಜನರು ಗಾಯಗೊಂಡಿದ್ದಾರೆ.
ಅಲ್ಪಸಂಖ್ಯಾತ ಸಮುದಾಯದವರ ಮೇಲೆ ನಡೆಯುತ್ತಿರುವ ಸರಣಿ ದಾಳಿಯಲ್ಲಿ ಇದು ಇತ್ತೀಚಿನದಾಗಿದೆ.
ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದ ಹೊರವಲಯದ ಅಖ್ತರಾಬಾದ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಲಾರಿಯಲ್ಲಿ ಬಂದ ಮೂವರು ಬಂದೂಕುಧಾರಿಗಳು 30 ಪ್ರಯಾಣಿಕರಿದ್ದ ಬಸ್ ತಡೆದರು. ಇಬ್ಬರು ಬಂದೂಕುಧಾರಿಗಳು ಬಸ್ ಪ್ರವೇಶಿಸಿ ಮನ ಬಂದಂತೆ ಗುಂಡು ಹಾರಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಮಾಧ್ಯಮಕ್ಕೆ ತಿಳಿಸಿದ್ದಾರೆ. ಗಾಯಗೊಂಡ ಮೂವರ ಸ್ಥಿತಿ ಗಂಭಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನ ಸ್ಫೋಟ ಯತ್ನ: ವಿಚಾರಣೆ ಆರಂಭ
ಡೆಟ್ರಾಯಿಟ್, (ಎಪಿ): ಮೂರು ವರ್ಷಗಳ ಹಿಂದೆ ಒಳ ಉಡುಪಿನಲ್ಲಿ ಬಾಂಬ್ ಅಡಗಿಸಿಟ್ಟುಕೊಂಡು ವಿಮಾನ ಸ್ಫೋಟಿಸಲು ಯತ್ನಿಸಿದ ಆರೋಪ ಎದುರಿಸುತ್ತಿರುವ ನೈಜೀರಿಯಾದ ಯುವಕನ ವಿಚಾರಣೆ ಮಂಗಳವಾರ ಇಲ್ಲಿಯ ನ್ಯಾಯಾಲಯದಲ್ಲಿ ಆರಂಭವಾಗಲಿದೆ. 2009ರಲ್ಲಿ ಉಮರ್ ಫಾರೂಕ್ (24) ಒಳ ಉಡುಪಿನಲ್ಲಿ ಬಾಂಬ್ ಅಡಗಿಸಿ ವಿಮಾನ ಸ್ಫೋಟಿಸಲು ಯತ್ನಿಸಿದ್ದ. ಬಾಂಬ್ ಸ್ಫೋಟಿಸದ ಕಾರಣ ಸಂಚು ವಿಫಲವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.