ADVERTISEMENT

`ಆರ್ಥಿಕ ಪುನಶ್ಚೇತನಕ್ಕೆ ಸಾಮೂಹಿಕ ಕ್ರಮ'

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 19:59 IST
Last Updated 5 ಸೆಪ್ಟೆಂಬರ್ 2013, 19:59 IST

ಸೇಂಟ್ ಪೀಟರ್ಸ್‌ಬರ್ಗ್ (ಪಿಟಿಐ): ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕೈಗೊಂಡಿರುವ ಅಸಾಂಪ್ರದಾಯಿಕ ಹಣಕಾಸು ವ್ಯವಸ್ಥೆಯ ವಿಸ್ತರಣೆಯನ್ನು ಮತ್ತು ಭಾರತದಂತಹ ಅಭಿವೃದ್ಧಿಶೀಲ ಹಾಗೂ ಹಿಂದುಳಿದ ರಾಷ್ಟ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ದಿಢೀರ್ ನೀತಿಗಳನ್ನು ಅನುಸರಿಸಿರುವ ಮುಂದುವರಿದ ದೇಶಗಳನ್ನು ಪ್ರಧಾನಿ ಮನಮೋಹನ್ ಸಿಂಗ್ ತರಾಟೆಗೆ ತೆಗೆದುಕೊಂಡರು.

ಗುರುವಾರ ರಾತ್ರಿ ಇಲ್ಲಿ ಆರಂಭವಾದ ಜಿ-20 ರಾಷ್ಟ್ರಗಳ ನಾಯಕರ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹೊಸ ಮಾರುಕಟ್ಟೆಗಳಲ್ಲಿ ಉತ್ತೇಜಕ ಆರ್ಥಿಕ ಬೆಳವಣಿಗೆಯ ಪುನಶ್ಚೇತನಕ್ಕಾಗಿ ಸಾಮೂಹಿಕ ಬದ್ಧತೆ ಪ್ರದರ್ಶಿಸಲು ಕರೆಯಿತ್ತರು. ಅಲ್ಲದೆ, ಪ್ರಸಕ್ತ ಆರ್ಥಿಕ ಬಿಕ್ಕಟನ್ನು ಹೋಗಲಾಡಿಸಲು ಜಿ-20 ಒಕ್ಕೂಟವು ತನ್ನಲ್ಲೇ ವಿಸ್ತೃತ ಸಮಾಲೋಚನೆಗಳನ್ನು ನಡೆಸುವಂತೆಯೂ ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ದೇಶದಲ್ಲಿ ರೂಪಾಯಿ ಮೌಲ್ಯದ ಕುಸಿತದ ಪ್ರತಿಕೂಲ ಪರಿಣಾಮಗಳನ್ನು ಉದಾಹರಿಸಿದರು.

ಕಳೆದ ಕೆಲವು ವಾರಗಳಿಂದ ರೂಪಾಯಿ ಮೌಲ್ಯ ಕುಸಿತದಿಂದಾಗಿ ಭಾರತದ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರಿರುವುದಾಗಿ ಘೋಷಿಸಿದ ಅವರು, ಸ್ಥಿರ ವಿದೇಶಿ ಹಣಕಾಸು ಚಲನೆಗೆ ಸ್ನೇಹಮಯವಾದ ಪರಿಸರದಲ್ಲಿ ಚಾಲ್ತಿ ಖಾತೆ ಕೊರತೆ (ಸಿಎಡಿ) ನೀಗಿಸಲು ಹಣವನ್ನು ಒದಗಿಸಲು ಕ್ರಮ ಕೈಗೊಂಡಿರುವುದಾಗಿಯೂ ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT