ADVERTISEMENT

ಉಕ್ರೇನ್‌ ಹಡಗುಕಟ್ಟೆ ಅತಿಕ್ರಮಿಸಿದ ರಷ್ಯಾ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 19:30 IST
Last Updated 3 ಮಾರ್ಚ್ 2014, 19:30 IST

ಕರ್ಚ್‌/ಉಕ್ರೇನ್‌ (ಪಿಟಿಐ): ಉಕ್ರೇ­ನ್‌ನ ಕ್ರಿಮಿಯಾ ಪರ್ಯಾಯ ದ್ವೀಪ ಪ್ರದೇಶ­ದಲ್ಲಿರುವ ಕರ್ಚ್‌ ನಗ­ರದ ಹಡಗು ಕಟ್ಟೆಯನ್ನು ರಷ್ಯಾ ಸೈನಿಕರು ಸೋಮವಾರ ವಶಕ್ಕೆ ತೆಗೆದು­ಕೊಂಡಿದ್ದಾರೆ.

ಕಪ್ಪು ಸಮುದ್ರದಲ್ಲಿ ಪ್ರಮುಖ ಆಯ­ಕಟ್ಟಿನ ಸ್ಥಳವೆಂದೇ ಗುರುತಿಸ­ಲಾ­ಗುವ ಇಲ್ಲಿಗೆ ರಷ್ಯಾ ಮತ್ತಷ್ಟು ಸೈನಿಕ­ರನ್ನು ಕಳುಹಿಸಲು ಯೋಜಿಸಿದೆ. ರಷ್ಯಾ ಸೈನಿಕ­ರನ್ನು ತಡೆಯಲು ಪಶ್ಚಿಮ ರಾಷ್ಟ್ರ­ಗಳು ಪ್ರಯತ್ನಿಸುತ್ತಿರುವ ಬೆನ್ನಲ್ಲೆ ರಷ್ಯಾ ಈ ಮಹತ್ವದ ಸ್ಥಳದ ಮೇಲೆ ನಿಯಂತ್ರಣ ಸಾಧಿಸಿದೆ.

ಕರ್ಚ್‌ ನಗರದ ಹಡಗು ಕಟ್ಟೆಯು ರಷ್ಯಾದ ಕಡಲ ಕಿನಾರೆಯಿಂದ ಕೇವಲ 20 ಕಿ.ಮೀ  ದೂರದಲ್ಲಿದೆ. ರಷ್ಯಾದ ಬಹು­ತೇಕ ಹಡಗುಗಳು ಇಲ್ಲಿಂದಲೆ ಪ್ರಯಾಣ ಬೆಳೆಸುತ್ತವೆ. ಇದೀಗ ಈ ಹಡಗು ನಿಲ್ದಾಣವನ್ನು ರಷ್ಯಾದ ಸೈನಿ­ಕರು ನಿರ್ವಹಿಸುತ್ತಿದ್ದಾರೆ.

 ‘ರಷ್ಯಾದ ಸೈನಿಕರು ಕ್ರಿಮಿಯಾದ ವಿಮಾನ ನಿಲ್ದಾಣವನ್ನು ವಶ­ಪಡಿಸಿ­ಕೊಂಡಿ­ದ್ದಾರೆ’ ಎಂದು ಉಕ್ರೇನ್‌ ಹೇಳಿದೆ. ವಾಯುನೆಲೆಯನ್ನು ಸಂಪೂರ್ಣ­ವಾಗಿ ಸುತ್ತವರೆದಿದೆ. ನಿಲ್ದಾಣದಲ್ಲಿನ ವಸ್ತು­ಗಳನ್ನು ಹಾಳುಗೆಡವಿದೆ ಎಂದೂ ತಿಳಿಸಿದೆ.

ವಿಶ್ವ ಸಮುದಾಯದ ಟೀಕೆ: ರಷ್ಯಾದ ಈ ಕ್ರಮಕ್ಕೆ ವಿಶ್ವ ಸಮುದಾಯದಿಂದ  ವ್ಯಾಪಕ ಟೀಕೆ ವ್ಯಕ್ತವಾಗಿದೆ. ‘ರಷ್ಯಾದ ಈ ನಡೆ ಬಹಳ ದುಸ್ಸಾಹಸದಿಂದ ಕೂಡಿದೆ. ಕೂಡಲೇ ತನ್ನ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು’ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್‌ ಕೆರಿ ಒತ್ತಾಯಿಸಿದ್ದಾರೆ.
ಒಂದೇ ಒಂದು ಗುಂಡು ಹಾರಿಸದೆ ರಷ್ಯಾ ಸೈನಿಕರು  ಕರ್ಚ್‌ ವಶಪಡಿಸಿ­ಕೊಂಡಿ­ದ್ದಾರೆ. ಇದೀಗ ಇತರ ಪ್ರದೇಶ­ಗಳ ಮೇಲೆಯೂ ನಿಯಂತ್ರಣ ಸಾಧಿ­ಸಲು ಮುಂದಾಗಿದ್ದು,  ಉಕ್ರೇನ್‌ ಆತಂಕ ಮತ್ತಷ್ಟು ಹೆಚ್ಚಿಸಿದೆ.

ಈ ಬೆಳವಣಿಗೆ ಮಧ್ಯೆಯೆ ಉಕ್ರೇನ್‌ನ ಹೊಸ ಸರ್ಕಾರ ತನ್ನ ಹಿಡಿತವನ್ನು ಬಲಪಡಿಸಿ­ಕೊಳ್ಳಲು ಹೊಸ ಪ್ರಾಂತ್ಯ­ಗಳಿಗೆ ಗವರ್ನರ್‌ಗಳನ್ನು ನೇಮಕ ಮಾಡಿದೆ.
ಅಲ್ಲದೇ ದೇಶದ ಉದ್ಯಮಿಗಳ ನೆರ­­ವನ್ನೂ ಯಾಚಿಸಿದೆ. ರಷ್ಯಾ ಪರ ನಿಷ್ಠೆ ವ್ಯಕ್ತ­­ಪಡಿಸಿದ್ದ ದೇಶದ ನೌಕಾಪಡೆಯ ಮುಖ್ಯಸ್ಥ­ರನ್ನೂ ವಜಾಗೊಳಿಸಿದೆ.

ಈ ಬಿಕ್ಕಟ್ಟಿಗೆ ರಾಜತಾಂತ್ರಿಕ ಮಾರ್ಗದ ಮೂಲಕ ಪರಿಹಾರ ಕಂಡು­ಕೊಳ್ಳಲು ವಿಶ್ವ ನಾಯಕರು ಶ್ರಮಿಸು­ತ್ತಿದ್ದಾರೆ. ನ್ಯಾಟೊ ಈ ಸಂಬಂಧ ಬ್ರಸೆಲ್ಸ್‌­ನಲ್ಲಿ ತುರ್ತು ಸಭೆ ಕರೆದಿದೆ. ಅಮೆ­ರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್‌ ಕೆರಿ ಮಂಗಳವಾರ ಉಕ್ರೇನ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಬ್ರಿಟನ್‌ ವಿದೇಶಾಂಗ ಸಚಿವ ವಿಲಿಯಂ ಹೇಗ್‌ ಉಕ್ರೇನ್‌ ರಾಜಧಾನಿ ಕೀವ್‌ಗೆ ತೆರಳಿದ್ದಾರೆ.

ರಷ್ಯಾ ಕ್ರಮಕ್ಕೆ ಜಿ7 ರಾಷ್ಟ್ರಗಳ ಖಂಡನೆ
(ವಾಷಿಂಗ್ಟನ್‌ ವರದಿ) (ಪಿಟಿಐ):
ಉಕ್ರೇನ್‌ ಮೇಲೆ ರಷ್ಯಾ ಕೈಗೊಂಡಿರುವ ಕ್ರಮ­ವನ್ನು ಆರ್ಥಿಕ ವಾಗಿ ಬಲಾಢ್ಯ­ವಾಗಿ­ರುವ ಏಳು ರಾಷ್ಟ್ರಗಳು (ಜಿ7) ತೀವ್ರವಾಗಿ ಖಂಡಿಸಿವೆ.

ಜೂನ್‌ನಲ್ಲಿ ರಷ್ಯಾದ ಸೋಚಿಯಲ್ಲಿ ಜಿ8 ರಾಷ್ಟ್ರಗಳ ಶೃಂಗಸಭೆ ಜರುಗಲಿದೆ. ಆ ಹಿನ್ನೆಲೆಯಲ್ಲಿ ನಡೆಯಲಿರುವ ಪೂರ್ವ­­ಸಿದ್ಧತಾ ಸಭೆಗಳಿಂದ  ತಾತ್ಕಲಿಕ­ವಾಗಿ ದೂರ ಉಳಿಯಲು ನಿರ್ಧರಿಸಿ­ರುವು­ದಾಗಿಯೂ ಜಿ7 ರಾಷ್ಟ್ರಗಳಾದ ಕೆನಡಾ, ಫ್ರಾನ್ಸ್‌, ಜರ್ಮನಿ, ಇಟಲಿ, ಜಪಾನ್‌, ಬ್ರಿಟನ್‌ ಮತ್ತು ಅಮೆರಿಕ ತಿಳಿಸಿವೆ.

ಇನ್ನೊಂದೆಡೆ ಜರ್ಮನಿ ವಿದೇಶಾಂಗ ಸಚಿವ ಫ್ರಾಂಕ್‌ ವಾಕ್ಟೆರ್‌ ಸ್ಟೆನ್‌­, ‘ಜಿ8 ಸಮಿತಿಯ ಸಭೆಯಲ್ಲಿ ಮಾತ್ರ ಪಶ್ಚಿಮ ರಾಷ್ಟ್ರಗಳು ರಷ್ಯಾದೊಂದಿಗೆ ನೇರ ಮಾತುಕತೆ ನಡೆಸಬಹುದು. ಹೀಗಿ­ರು­ವಾಗ ನಾವು ಆ ಅವಕಾಶವನ್ನು ಏಕೆ ಬಿಟ್ಟು­ ಕೊಡಬೇಕು’ ಎಂದು  ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.