ADVERTISEMENT

ಕಡಲ್ಗಳ್ಳರಿಂದ ಹಡಗು ಅಪಹರಣ: 24 ಭಾರತೀಯರು ಸಂಕಷ್ಟದಲ್ಲಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2013, 10:50 IST
Last Updated 17 ಜುಲೈ 2013, 10:50 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಅಬುಜಾ / ಮುಂಬೈ/ ಕೋಲ್ಕತ್ತಾ (ಪಿಟಿಐ): ಟರ್ಕಿ ದೇಶಕ್ಕೆ ಸೇರಿದ ತೈಲ ಹಡಗೊಂದನ್ನು ಪಶ್ಚಿಮ ಆಫ್ರಿಕಾದ ಗೋಬನ್ ದೇಶದಲ್ಲಿ ಕಡಲ್ಗಳ್ಳರು ಅಪಹರಿಸಿದ್ದು, ಇದರಲ್ಲಿ 24 ಮಂದಿ ಭಾರತೀಯರು ಸಿಕ್ಕಿಹಾಕಿಕೊಂಡಿದ್ದಾರೆ.

ತೈಲ ಹಾಗೂ ರಾಸಾಯನಿಕಗಳನ್ನು ತುಂಬಿದ್ದ ಈ ಹಡಗು ಗೋಬನ್ ದೇಶದ ಪೋರ್ಟ್ ಜೆಂಟಿಲ್ ನಗರದಿಂದ ಸೋಮವಾರ ಬೆಳಿಗ್ಗೆ ಪ್ರಯಾಣದ ಬೆಳೆಸಿದ ನಂತರ ಟರ್ಕಿ ದೇಶದೊಂದಿಗೆ ಸಂಪರ್ಕ ಕಡಿದುಕೊಂಡಿತೆಂದು ಟರ್ಕಿ ವಿದೇಶಾಂಗ ಇಲಾಖೆಯ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಮಂಗಳವಾರ ಈ ನತದೃಷ್ಟ ಹಡಗು ನೈಜೀರಿಯಾ ಸಮೀಪದಲ್ಲಿ ಪ್ರಯಾಣಿಸುತ್ತಿತ್ತೆಂದು ಉಪಗ್ರಹದ ದತ್ತಾಂಶಗಳಿಂದ ತಿಳಿದು ಬಂದಿದೆ.

ಸದ್ಯ ಈ ಹಡಗು ಐವರಿ ಕೋಸ್ಟ್ ಬಳಿ ಸಾಗುತ್ತಿದೆ ಎಂದು ಹೇಳಲಾಗಿದೆ.

ರಾತ್ರಿ ಸಮಯದಲ್ಲಿ ಹಡಗು ಅಪಹರಣಕ್ಕೆ ಒಳಗಾಗಿದೆ. ಈ ಬಗ್ಗೆ ಎಲ್ಲಾ ಸಿಬ್ಬಂದಿ ವರ್ಗಕ್ಕೂ ತಿಳಿಸಲಾಗಿದೆ. ಆದರೆ ದುರಾದೃಷ್ಟವಶಾತ್ ಹಡಗು ಇನ್ನೂ ಚಲಿಸುತ್ತಿದ್ದು, ಅದನ್ನು ಕಡಲ್ಗಳರಿಂದ ಮುಕ್ತಗೊಳಿಸಲು ಕ್ಯಾಮರೂನ್ ಹಾಗೂ ನೈಜೀರಿಯಾ ದೇಶಗಳೊಂದಿಗೆ ಸತತ ಸಂಪರ್ಕದಲ್ಲಿದ್ದೇವೆ ಎಂದು ಗೋಬನ್ ದೇಶದ ಟರ್ಕಿ ರಾಯಭಾರಿ ತಿಳಿಸಿದ್ದಾರೆ.

ಈ ಮಧ್ಯೆ ಹಡಗಿನಲ್ಲಿದ್ದ 24 ಮಂದಿ ಭಾರತೀಯರ ಕುಟುಂಬಗಳು ಆತಂಕಕ್ಕಿಕೆ ಒಳಗಾಗಿವೆ. ತಮ್ಮವರ ಸುರಕ್ಷಿತ ವಾಪಸಾತಿಗಾಗಿ ಭಾರತೀಯ ವಿದೇಶಾಂಗ ಇಲಾಖೆ ತಕ್ಷಣ ಕಾರ್ಯೋನ್ಮುಖವಾಗಬೇಕೆಂದು ಅವರು ಆಗ್ರಹಿಸಿದ್ದಾರೆ.

ತಾವು ತಮ್ಮ ತಂದೆಯ ಜತೆ ಭಾನುವಾರದಿಂದ ಇಲ್ಲಿವರೆಗೂ ಯಾವುದೇ ಕರೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹಡಗಿನ ಕ್ಯಾಪ್ಟನ್ ಶಿಶಿರ್ ವಹಿ ಅವರ ಪುತ್ರಿ ರಿಚಾ ವಹಿ ಅವರು ಕೋಲ್ಕತ್ತಾದಲ್ಲಿ ತಮ್ಮ ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.