ವಿಶ್ವಸಂಸ್ಥೆ: ಕಾಶ್ಮೀರ ಕಣಿವೆ ಹಾಗೂ ಗಡಿ ನಿಯಂತ್ರಣ ರೇಖೆಯಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಸವಾಲಾಗಿ ಪರಿಣಮಿಸಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಪಾಕಿಸ್ತಾನ ತಿಳಿಸಿದೆ.
‘ಭದ್ರತಾ ಮಂಡಳಿಯ ಅಧ್ಯಕ್ಷ, ವಿಶ್ವಸಂಸ್ಥೆಯಲ್ಲಿನ ಪೆರುವಿನ ಕಾಯಂ ರಾಯಭಾರಿ ಆಗಿರುವ ಗಸ್ಟಾವೊ ಮೆಜಾ–ಕ್ವಾಡ್ರಾ ಅವರೊಂದಿಗೆ ಕಾಶ್ಮೀರ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿದ್ದೇನೆ’ ಎಂದು ವಿಶ್ವಸಂಸ್ಥೆಯಲ್ಲಿನ ಪಾಕಿಸ್ತಾನದ ರಾಯಭಾರಿ ಮಲೀಹಾ ಲೋಧಿ ಅವರು ಟ್ವೀಟ್ ಮಾಡಿದ್ದಾರೆ.
‘ಕಾಶ್ಮೀರ ಏಕತಾ ದಿನದಂದು ಪಾಕಿಸ್ತಾನ ಹಾಗೂ ಕಾಶ್ಮೀರ ಸದಸ್ಯರೊಂದಿಗೂ ಈ ಸಂಬಂಧ ಚರ್ಚೆ ಮಾಡಿದ್ದೇನೆ’ ಎಂದು ಇನ್ನೊಂದು ಟ್ವೀಟ್ ಮಾಡಿದ್ದಾರೆ. ಚರ್ಚೆ ನಡೆದ ಸಂದರ್ಭದ ಛಾಯಾಚಿತ್ರಗಳನ್ನೂ ಪ್ರಕಟಿಸಿದ್ದಾರೆ.
‘ಭಾರತದೊಂದಿಗಿನ ವಿವಾದದ ಕುರಿತು ವಿಶ್ವಸಂಸ್ಥೆ ಮಧ್ಯಸ್ಥಿಕೆ ವಹಿಸಬೇಕು’ ಎಂದು ಪಾಕಿಸ್ತಾನ ಒತ್ತಾಯಿಸುತ್ತಲೇ ಇದೆ. ಆದರೆ, ಕಾಶ್ಮೀರ ವಿಚಾರವು ದ್ವಿಪಕ್ಷೀಯವಾಗಿ ಇತ್ಯರ್ಥವಾಗಬೇಕು ಎಂಬುದು ಭಾರತದ ವಾದ.
‘ವೀರೋಚಿತ ಹೋರಾಟ ನಡೆಸುತ್ತಿರುವ ಕಾಶ್ಮೀರದಲ್ಲಿನ ನಮ್ಮ ಸೋದರ ಸೋದರಿಯರಿಗೆ ಬೆಂಬಲ ಮುಂದುವರಿಸಲಿದ್ದೇವೆ’ ಎಂದು ಅವರು ಇದಕ್ಕೂ ಮುನ್ನ ಟ್ವೀಟ್ನಲ್ಲಿ ಹೇಳಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.