ADVERTISEMENT

ತಾರಕಕ್ಕೇರಿದ ಪಾಕ್ ಬಿಕ್ಕಟ್ಟು; ಪ್ರಧಾನಿಗೆ ನ್ಯಾಯಾಂಗ ನಿಂದನೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 10:20 IST
Last Updated 16 ಜನವರಿ 2012, 10:20 IST

ಇಸ್ಲಾಮಾಬಾದ್ (ಪಿಟಿಐ/ಐಎಎನ್‌ಎಸ್):  ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಅವರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ತಾನು ನೀಡಿದ ಆದೇಶವನ್ನು ಪಾಲಿಸದೆ ಇದ್ದುದ್ದಕ್ಕೆ ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರಿಗೆ ಇಲ್ಲಿನ ಸುಪ್ರೀಂಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದ್ದು, ವೈಯಕ್ತಿಕವಾಗಿ ಜನವರಿ 19ರೊಳಗೆ ಹಾಜರಾಗುವಂತೆ ಸೂಚನೆ ನೀಡಿದೆ.

ಇದರ ಬೆನ್ನಲ್ಲೆ ಪ್ರಧಾನಿ ಗಿಲಾನಿ ಅವರು ಅಧ್ಯಕ್ಷ ಜರ್ದಾರಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಜನವರಿ 2007ರಲ್ಲಿ ಅಂದಿನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಅಧಿಕಾರಾವಧಿಯಲ್ಲಿನ ಭ್ರಷ್ಟಾಚಾರ ಪ್ರಕರಣಗಳಲ್ಲಿ ನೀಡಲಾಗಿದ್ದ ಕ್ಷಮಾದಾನವನ್ನು ಸುಪ್ರೀಂಕೋರ್ಟ್ ಡಿಸೆಂಬರ್ 2009ರಲ್ಲಿ ರದ್ದುಪಡಿಸಿತ್ತು.

ಅಲ್ಲದೆ ಕ್ಷಮಾದಾನದ ಫಲಾನುಭವಿಗಳಾದ ಅಧ್ಯಕ್ಷ ಜರ್ದಾರಿ ಸೇರಿದಂತೆ ಇತರೆ 800 ಮಂದಿಯ ವಿರುದ್ಧದ ಪ್ರಕರಣಗಳನ್ನು ಪುನ: ತನಿಖೆಗೆ ಕೈಗೆತ್ತಿಕೊಳ್ಳುವಂತೆ ಸುಪ್ರೀಂಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿತ್ತು.

ಈ ಸೂಚನೆಯನ್ನು ಪಾಲಿಸದ ಸರ್ಕಾರದ ವಿರುದ್ಧ 7 ಮಂದಿ ನ್ಯಾಯಾಧೀಶರಿದ್ದ ನ್ಯಾಯಪೀಠ ತೀವ್ರ ಅತೃಪ್ತಿ ವ್ಯಕ್ತಪಡಿಸಿತಲ್ಲದೆ ಪ್ರಧಾನಿ ಅವರು ಜನವರಿ 19ರೊಳಗೆ ಹಾಜರಾಗುವಂತೆ ಸೂಚಿಸಿದೆ.

ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿರುವ ಮತ್ತೊಂದು ಪ್ರಕರಣವಾದ ಮೆಮೊಗೇಟ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಬೆಳಕಿಗೆ ಬರುವಲ್ಲಿ ಪ್ರಮುಖ ವ್ಯಕ್ತಿಯಾದ ಪಾಕ್ ಮೂಲದ ಅಮೆರಿಕನ್ ವಾಣಿಜೋದ್ಯಮಿ ಮನ್ಸೂರ್ ಇಜಾಜ್ ನ್ಯಾಯಾಲಯಕ್ಕೆ ಹಾಜರಾಗುವುದಕ್ಕೆ ಜನವರಿ 24ರವರೆಗೆ ಕಾಲಾವಕಾಶ ಪಡೆದಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT