ADVERTISEMENT

ದಂಡ ತೆತ್ತ 14 ಭಾರತೀಯರ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2011, 19:30 IST
Last Updated 17 ಜನವರಿ 2011, 19:30 IST

ಮೊಗದಿಶು (ಎಎಫ್‌ಪಿ):ಸೋಮಾಲಿಯಾದ ಶೆಬಾಬ್ ಬಂಡುಕೋರರ ನಿಯಂತ್ರಣದಲ್ಲಿದ್ದ ಕಲ್ಲಿದ್ದಲನ್ನು ಅಕ್ರಮವಾಗಿ ರಫ್ತು ಮಾಡಿದ ಆರೋಪದ ಮೇಲೆ ಶಿಕ್ಷೆಗೆ ಒಳಗಾಗಿದ್ದ 14 ಮಂದಿ ಭಾರತೀಯ ನಾವಿಕರನ್ನು ದಂಡ ಪಾವತಿ ನಂತರ ಬಿಡುಗಡೆಗೊಳಿಸಲಾಗಿದೆ.

ಮೊಗದಿಶು ನ್ಯಾಯಾಲಯ ಶನಿವಾರ 14 ಮಂದಿ ಭಾರತೀಯ ನಾವಿಕರಿಗೆ ಒಂದು ವರ್ಷ ಶಿಕ್ಷೆ ಅಥವಾ ಹತ್ತು ಸಾವಿರ ಡಾಲರ್ ದಂಡ ವಿಧಿಸಿತ್ತು. ಭಾನುವಾರ ಈ ಎಲ್ಲಾ ನಾವಿಕರು ದಂಡವನ್ನು ಪಾವತಿ ಮಾಡಿದ ಮೇಲೆ ಅವರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಸೋಮಾಲಿಯಾದ ಕಾರಗೃಹ ಇಲಾಖೆ ಸೇವೆಗಳ ಅಧಿಕಾರಿ ಜನರಲ್ ಅಬ್ದುಲಾಹಿ ಮೊಲಿಂ ಅಲಿ ತಿಳಿಸಿದ್ದಾರೆ. ಕಳೆದ ವಾರ ಸೋಮಾಲಿಯಾದ ದಕ್ಷಿಣ ಬಂದರು ಕಿಸ್‌ಮಾಯೋಗೆ ಕಲ್ಲಿದ್ದಲನ್ನು ಸಾಗಿಸುತ್ತಿದ್ದ ಸಂದರ್ಭದಲ್ಲಿ ಸೋಮಾಲಿಯಾ ಕಡಲು ಕಾವಲು ಪಡೆಯವರು ಹಡಗು ತಡೆದು ಕಲ್ಲಿದ್ದಲನ್ನು ವಶಪಡಿಸಿಕೊಂಡು, ನಾವಿಕರನ್ನು ಬಂಧಿಸಿದ್ದರು.

ಅಲ್‌ಖೈದಾದಿಂದ ಸ್ಫೂರ್ತಿಗೊಂಡಿರುವ ಶೆಬಾಬ್ ಬಂಡುಕೋರರ ನಿಯಂತ್ರಣದಲ್ಲಿರುವ ದಕ್ಷಿಣ ಮತ್ತು ಕೇಂದ್ರ ಸೋಮಾಲಿಯಾದ ಭಾಗಗಳಲ್ಲಿ ಕಲ್ಲಿದ್ದಲು ಪ್ರಮುಖ ಆದಾಯದ ಮೂಲವಾಗಿದೆ. ಕೊಲ್ಲಿ ರಾಜ್ಯಗಳಿಗೆ ಕಲ್ಲಿದ್ದಲು ಕಳ್ಳಸಾಗಣೆ ಮಾಡುವ ಹೆಚ್ಚಿನವರು ಭಾರತೀಯ ಹಡಗುಗಳನ್ನು ಬಾಡಿಗೆಗೆ ಪಡೆಯುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.