ADVERTISEMENT

ನೋವು ಶಮನಕ್ಕೆ ಪ್ರೀತಿಪಾತ್ರರ ಚಿತ್ರ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 15:35 IST
Last Updated 25 ಫೆಬ್ರುವರಿ 2011, 15:35 IST

ಲಂಡನ್ (ಪಿಟಿಐ):  ಮುಂದಿನ ಬಾರಿ ನೀವು ವಿಪರೀತ ನೋವಿನಿಂದ ಬಳಲುತ್ತಿ ್ದ ದ್ದರೆ ನಿಮ್ಮ ಪ್ರೀತಿಪಾತ್ರರ ಚಿತ್ರ ನೋಡಿ- ನಿಮ್ಮ ನೋವು ಶೇ. 44 ರಷ್ಟು ಕಡಿಮೆಯಾಗಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಸ್ಟಾನ್‌ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ  ಪ್ರೀತಿಸುವವರ ಚಿತ್ರ ನೋಡಿದಲ್ಲಿ ಪ್ಯಾರಾಸಿಟಮಲ್ ಅಥವಾ ಕೊಕೈನ್‌ನಂತಹ ಮಾದಕ ವಸ್ತುಗಳು ಮಾಡಿದಷ್ಟೇ ಪ್ರಮಾಣದ  ಕಾರ್ಯ  ಮೆದುಳಿನ ನೋವು ಉಂಟುಮಾಡುವ ತಾಣದಲ್ಲಿ ಉಂಟಾಗುತ್ತದೆ ಎಂದು ತಿಳಿದುಬಂದಿದೆ.

ಪ್ರೇಮಪಾಶದಲ್ಲಿ ಸಿಲುಕಿದ ಕೆಲವು ವಿದ್ಯಾರ್ಥಿಗಳ ಮೇಲೆ ಸಂಶೋಧಕರು ನಡೆಸಿದ ಅಧ್ಯಯನದಲ್ಲಿ ಈ ಬಗ್ಗೆ ತಿಳಿದುಬಂತು ಎಂದು ‘ಡೈಲಿ ಮೈಲ್’ ವರದಿ ಮಾಡಿದೆ. ಈ ವಿದ್ಯಾರ್ಥಿಗಳಿಗೆ ಅವರು ತಾವು ಪ್ರೀತಿಸಿದವರ ಚಿತ್ರ ನೋಡುತ್ತಿದ್ದಂತೆ  ಮೆದುಳಿನ ಎಂಆರ್‌ಐ ಸ್ಕ್ಯಾನ್ ನಡೆಸಲಾಯಿತು. ಸರಾಸರಿ ಶೇ. 36 ರಿಂದ 44 ರಷ್ಟು ನೋವು ಕಡಿಮೆಯಾಗಿದ್ದು ಶೇ. 13 ರಷ್ಟು ಅಸ್ವಸ್ಥತೆ ಕಡಿಮೆಯಿತು ಎಂದು ಅಧ್ಯಯನದ ನೇತೃತ್ವ ವಹಿಸಿದ ಜಾರ್ಡ್ ಯಂಗರ್ ತಿಳಿಸಿದ್ದಾರೆ.

10 ನ್ಯಾಟೊ ಟ್ಯಾಂಕರ್‌ಗಳಿಗೆ ಬೆಂಕಿ
ಇಸ್ಲಾಮಾಬಾದ್ (ಐಎಎನ್‌ಎಸ್): ಪಕ್ಕದ ಆಘ್ಫಾನಿಸ್ತಾನದಲ್ಲಿರುವ ನ್ಯಾಟೊ ಸೇನಾಪಡೆಗೆ ಇಂಧನ ಪೂರೈಸುವ 10 ನ್ಯಾಟೊ ಟ್ಯಾಂಕರ್‌ಗಳನ್ನು ಪಾಕಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ಉಗ್ರರು ಬೆಂಕಿ ಹಚ್ಚಿದ್ದು ಕನಿಷ್ಠ ನಾಲ್ಕು ಮಂದಿ ಮೃತಪಟ್ಟಿದ್ದಾರೆ ಎಂದು ಶುಕ್ರವಾರ ಮಾಧ್ಯಮಗಳು ವರದಿಮಾಡಿವೆ.

ಉತ್ತರ ಖೈಬರ್-ಫಖ್‌ತುನ್‌ವಾ ಪ್ರಾಂತ್ಯದ ರಾಜಧಾನಿ ಪೆಶಾವರದ ರಸ್ತೆ ಬದಿ ನಿಲ್ಲಿಸಲಾಗಿದ್ದ ಟ್ಯಾಂಕರ್‌ಗಳ ಮೇಲೆ  ಉಗ್ರರ ಗುಂಪೊಂದು ಗುರುವಾರ ದಾಳಿ ನಡೆಸಿತು ಎಂದು ಜಿಯೋ ಟಿವಿ ವರದಿಮಾಡಿದೆ.

ಉಗ್ರರು ಟ್ಯಾಂಕರ್‌ಗಳ ಮೇಲೆ ಗುಂಡಿನ ದಾಳಿ ನಡೆಸಿದಾಗ ಹೊತ್ತಿಕೊಂಡ ಬೆಂಕಿ  ಹಲವು ಟ್ಯಾಂಕರ್‌ಗಳನ್ನು ಕ್ಷಣದಲ್ಲಿ ಆವರಿಸಿತು. ಟ್ಯಾಂಕರ್‌ಗಳ ಚಾಲಕರು ಮತ್ತು ಕ್ಲೀನರ್‌ಗಳು ಎಂದು ನಂಬಲಾದ ನಾಲ್ಕು ಮಂದಿ ದಾಳಿಯಲ್ಲಿ ಮೃತಪಟ್ಟಿದ್ದಾರೆ  ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ.

ಟ್ರೈವ್ಯಾಲಿ:  ಕಾಲುಪಟ್ಟಿಯಿಂದ  ನಾಲ್ವರಿಗೆ ಮುಕ್ತಿ
ವಾಷಿಂಗ್ಟನ್, (ಪಿಟಿಐ):  ವ್ಯಾಪಕ ವಿಸಾ ವಂಚನೆ ಮತ್ತು ವಿದ್ಯಾರ್ಥಿಗಳ ಕಾಲಿಗೆ ರೆಡಿಯೋ ಕಾಲರ್ ಅಳವಡಿಕೆಗೆ ಕಾರಣವಾದ ಕ್ಯಾಲಿಫೋರ್ನಿಯಾದ ಟ್ರೈ ವ್ಯಾಲಿ ವಿಶ್ವವಿದ್ಯಾಲಯದ ಇನ್ನೂ ನಾಲ್ವರು ಭಾರತೀಯ ವಿದ್ಯಾರ್ಥಿಗಳ ಕಾಲು ಪಟ್ಟಿಯನ್ನು ಅಮೆರಿಕದ ವಲಸೆ ಮತ್ತು ಸುಂಕ ಜಾರಿ ವಿಭಾಗ ಶುಕ್ರವಾರ ತೆಗೆದುಹಾಕಿದೆ. ಇದರೊಂದಿಗೆ ಒಟ್ಟು 11 ಭಾರತೀಯ ವಿದ್ಯಾರ್ಥಿಗಳ ಕಾಲುಪಟ್ಟಿ (ರೆಡಿಯೋ ಕಾಲರ್)ಯನ್ನು ತೆಗೆದಂತಾಗಿದ್ದು ಇನ್ನೂ ನಾಲ್ವರ ಪಟ್ಟಿ ತೆಗೆಯುವ ನಿರೀಕ್ಷೆ ಇದೆ ಎಂದು ಸ್ಯಾನ್ ಫ್ರಾನ್ಸಿಸ್ಕೋದ ಭಾರತೀಯ ರಾಯಭಾರ ಕಚೇರಿಯ ಕಾನ್ಸುಲ್ ಜನರಲ್ ಸುಸ್ಮಿತಾ ಗಂಗೂಲಿ ಥಾಮಸ್ ಹೇಳಿದ್ದಾರೆ.

ಈ 15 ವಿದ್ಯಾರ್ಥಿಗಳು ಕಾನೂನು ನೆರವು ಕೋರಿ ಭಾರತೀಯ ರಾಯಭಾರ ಕಚೇರಿಯ ಮೊರೆ ಹೋಗಿದ್ದರು. ಇನ್ನೂ ಮೂವರು ವೈಯಕ್ತಿಕ ನೆಲೆಯಲ್ಲಿ ಕಾನೂನು ಹೋರಾಟ ನಡೆಸಿದ್ದು ಆ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.