ಇಸ್ಲಾಮಾಬಾದ್(ಪಿಟಿಐ): ನಿರಂತರ ಮಾತುಕತೆ ಮೂಲಕ ಕಾಶ್ಮೀರ ಸೇರಿದಂತೆ ಭಾರತದೊಂದಿಗಿನ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಬದ್ಧವಾಗಿದ್ದೇವೆ ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ. ನೆರೆಹೊರೆಯಲ್ಲಿ ಶಾಂತಿ ಅತ್ಯಂತ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ದಕ್ಷಿಣ ಏಷ್ಯಾದಲ್ಲಿ ಸಹಕಾರ ಮುಖ್ಯವೇ ಹೊರತು ಸಂಘರ್ಷ ಅಲ್ಲ ಎಂದು ಪಾಕಿಸ್ತಾನದ ಮಧ್ಯಪ್ರಾಚ್ಯದ ರಾಯಭಾರಿಗಳ ಸಭೆಯಲ್ಲಿ ಹೇಳಿದರು.
ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿ, ಸಂಪೂರ್ಣ ಸಾಮರ್ಥ್ಯದ ಪ್ರಯೋಜನ ಪಡೆದುಕೊಂಡಾಗ ಮಾತ್ರ ಈ ಪ್ರದೇಶದ ಜನರ ಭರವಸೆ ಮತ್ತು ಆಕಾಂಕ್ಷೆಗಳು ನನಸಾಗುವುದು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಕೆಲವೇ ದಿನಗಳ ಹಿಂದೆ ಪಾಕಿಸ್ತಾನದ ಪ್ರಭಾವಿ ಸೇನಾ ಮುಖ್ಯಸ್ಥ ರಹೀಲ್ ಷರೀಫ್ ಕಾಶ್ಮೀರ ವಿಷಯದಲ್ಲಿ ವಿವಾದ ಸೃಷ್ಟಿಸಿದ್ದರು. ಕಾಶ್ಮೀರವು ಪಾಕಿಸ್ತಾನದ ಕಂಠ ರಕ್ತನಾಳ ಎಂದು ಅವರು ಹೇಳಿದ್ದರು.
ಕಳೆದ ವರ್ಷ ನಡೆದ ಚುನಾವಣೆ ನಂತರ ಅಧಿಕಾರ ವಹಿಸಿಕೊಳ್ಳುವುದಕ್ಕೆ ಮೊದಲೇ ಭಾರತದೊಂದಿಗೆ ಉತ್ತಮ ಸಂಬಂಧ ಹೊಂದುವ ಬಗ್ಗೆ ಶರೀಫ್ ಹೇಳಿಕೆಗಳನ್ನು ನೀಡಿದ್ದರು.
ಆದರೆ ಕಳೆದ ಇಡೀ ವರ್ಷ ನಿಯಂತ್ರಣ ರೇಖೆಯಲ್ಲಿನ ಸಂಘರ್ಷದಲ್ಲಿ ಭಾರತದ ಹಲವು ಯೋಧರು ಮೃತಪಟ್ಟು ಉತ್ತಮ ಬಾಂಧವ್ಯಕ್ಕೆ ಧಕ್ಕೆ ಉಂಟಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.