ಬ್ಯಾಂಕಾಕ್: ಮ್ಯಾನ್ಮಾರ್ ಸೇನೆ ರೋಹಿಂಗ್ಯಾ ಅಲ್ಪ ಸಂಖ್ಯಾತ ಮುಸ್ಲೀಮರನ್ನು ದೇಶದಿಂದ ಉಚ್ಛಾಟಿಸುವ ವೇಳೆ ನೂರಾರು ಜನರನ್ನು ಹತ್ಯೆ ಮಾಡಿರುವುದು ‘ವ್ಯವಸ್ಥಿತವಾದ ಕಾರ್ಯಾಚರಣೆ’ ಎಂದು ಅಮ್ನೇಸ್ಟಿ ಇಂಟರ್ನ್ಯಾಷನಲ್ ಸಂಸ್ಥೆ ವರದಿ ಮಾಡಿದೆ.
ಮ್ಯಾನ್ಮಾರ್ ಸೇನೆ ದಾಳಿ ನಡೆಸಿದ ನಂತರ ಆಗಸ್ಟ್ 25ರಿಂದೀಚೆಗೆ ಸುಮಾರು 5,80,000 ರೋಹಿಂಗ್ಯಾಗಳು ಬಾಂಗ್ಲಾದೇಶದತ್ತ ಪಲಾಯನ ಮಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮ್ಯಾನ್ಮಾರ್ ಸರ್ಕಾರ ಮುಸ್ಲಿಂ ದಂಗೆಕೋರರ ವಿರುದ್ಧವಷ್ಟೇ ಪ್ರತಿದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ. ಆದರೆ, ಈ ಪ್ರತಿಕ್ರಿಯೆ ಅಸಮಂಜಸವಾಗಿದೆ ಎಂದು ವಿಶ್ವಸಂಸ್ಥೆ ಹಾಗೂ ಹಲವು ರಾಷ್ಟ್ರಗಳು ಮ್ಯಾನ್ಯಾರ್ ಹೇಳಿಕೆಯನ್ನು ಅಲ್ಲಗಳೆದಿವೆ.
ರೋಹಿಂಗ್ಯಾ ಮುಸ್ಲಿಮರ ವಲಸೆ ಮುಂದುವರಿದಿರುವುದು ವಿಶ್ವದ ಪ್ರಮುಖ ಮಾನವೀಯ ಬಿಕ್ಕಟ್ಟು ಎನ್ನಲಾಗಿದ್ದು, ಮ್ಯಾನ್ಮಾರ್ ಸರ್ಕಾರವನ್ನು ಅಂತರರಾಷ್ಟ್ರೀಯ ಸಮುದಾಯ ತೀವ್ರವಾಗಿ ಖಂಡಿಸಿವೆ.
ದೇಶದಿಂದ ಪಲಾಯನ ಮಾಡಿರುವ 120ಕ್ಕೂ ಹೆಚ್ಚು ಮಂದಿ ರೋಹಿಂಗ್ಯಾಗಳನ್ನು ಸಂದರ್ಶಿಸಿ ವರದಿ ತಯಾರಿಸಲಾಗಿದೆ. ಅದರ ಪ್ರಕಾರ ಭದ್ರತಾ ಪಡೆ ಸಿಬ್ಬಂದಿ ರೋಹಿಂಗ್ಯಾಗಳು ನೆಲೆಸಿದ್ದ ಗ್ರಾಮಗಳನ್ನು ಸುತ್ತುವರಿದು ದಾಳಿ ನಡೆಸಿದ್ದರು.
'ಈ ವೇಳೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಕಟ್ಟಡಗಳಿಂದ ಇಳಿದು ತಪ್ಪಿಸಿಕೊಳ್ಳಲು ಸಾಧ್ಯವಾಗದ ವೃದ್ಧರು, ರೋಗಿಗಳು ಹಾಗೂ ಅಂಗವಿಕಲರು ಅಲ್ಲಿಯೇ ಮೃತಪಟ್ಟಿದ್ದಾರೆ. ಕೆಲವು ಪ್ರದೇಶಗಳಲ್ಲಿ ಮಹಿಳೆಯರು ಹಾಗೂ ಯುವತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ' ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.